ಪ್ರವಾಹ
ನವದೆಹಲಿ: ಮಳೆ ಹಾನಿ, ಪ್ರವಾಹ, ಪ್ರಕೃತಿ ವಿಕೋಪಗಳಿಂದ 2024-25ರಲ್ಲಿ 2,800 ಜನರು ಪ್ರಾಣ ಕಳೆದುಕೊಂಡಿದ್ದು, 3.47 ಲಕ್ಷ ಮನೆಗಳು ಹಾನಿಗೊಳಗಾಗಿವೆ.
ಗೃಹ ಇಲಾಖೆಯ ರಾಜ್ಯ ಸಚಿವ ನಿತ್ಯಾನಂದ ರೈ ಅವರು ಮಂಗಳವಾರ ಲೋಕಸಭೆಗೆ ಮಾಹಿತಿ ನೀಡಿದರು.
ಮಧ್ಯಪ್ರದೇಶದಲ್ಲಿ 373, ಹಿಮಾಚಲ ಪ್ರದೇಶದಲ್ಲಿ 358, ಮತ್ತು ಗುಜರಾತ್ನಲ್ಲಿ 230 ಜನರು ಮಳೆ ಹಾನಿ, ಪ್ರವಾಹ, ಪ್ರಕೃತಿ ವಿಕೋಪಗಳಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಿದರು.
ಪ್ರಸಕ್ತ ಸಾಲಿನಲ್ಲಿ 2,803 ಜನರು ಪ್ರಾಣಕಳೆದುಕೊಂಡಿದ್ದು, 3.47 ಲಕ್ಷ ಮನೆಗಳು ಹಾನಿಗೊಳಗಾಗಿವೆ, 58,835 ರಾಸುಗಳು ಸಾವನ್ನಪ್ಪಿವೆ. ಒಟ್ಟು 10.23 ಲಕ್ಷ ಹೆಕ್ಟೇರ್ ಬೆಳೆ ನಾಶವಾಗಿದೆ ಎಂದು ಅವರು ಮಾಹಿತಿ ನೀಡಿದರು.
ವಿಪತ್ತು ಪರಿಹಾರ ನಿಧಿಯಿಂದ ಮೊದಲ ಕಂತಿನಲ್ಲಿ ₹ 10,728 ಕೋಟಿ ಬಿಡುಗಡೆ ಮಾಡಲಾಗಿತ್ತು, ಎರಡನೇ ಕಂತಿನಲ್ಲಿ ₹ 4,150 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.
ಕರ್ನಾಟಕದಲ್ಲಿ, ವಿಶೇಷವಾಗಿ ಹಾವೇರಿ ಮತ್ತು ಗದಗ ಜಿಲ್ಲೆಗಳಲ್ಲಿ ಪ್ರವಾಹದಿಂದ ಉಂಟಾದ ಹಾನಿಯ ಮೌಲ್ಯಮಾಪನವನ್ನು ಸರ್ಕಾರ ನಡೆಸಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು ರಾಜ್ಯ ಸರ್ಕಾರದಿಂದ ಹೆಚ್ಚುವರಿ ಸಹಾಯಕ್ಕಾಗಿ ಯಾವುದೇ ಅಹವಾಲು ಬಂದಿಲ್ಲ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.