ಸಸಾಂದರ್ಭಿಕ ಚಿತ್ರ
ಐಸ್ಟೋಕ್ ಚಿತ್ರ
ಕೋಲ್ಕತ್ತ: ನಗರದ ಬಂಟಲಾ ಪ್ರದೇಶದ ಕೋಲ್ಕತ್ತ ಲೆದರ್ ಕಾಂಪ್ಲೆಕ್ಸ್ನಲ್ಲಿ ಮ್ಯಾನ್ಹೋಲ್ ಶುಚಿಗೊಳಿಸುವ ವೇಳೆ ಚರಂಡಿಗೆ ಬಿದ್ದು ನಾಪತ್ತೆಯಾಗಿದ್ದ ಮೂವರು ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೋಲ್ಕತ್ತ ಲೆದರ್ ಕಾಂಪ್ಲೆಕ್ಸ್ನಲ್ಲಿ ಚರ್ಮದ ಘಟಕಗಳ ತ್ಯಾಜ್ಯದಿಂದ ಮುಚ್ಚಿಹೋಗಿದ್ದ ಮ್ಯಾನ್ಹೋಲ್ ಶುಚಿಗೊಳಿಸುವ ವೇಳೆ ಒಬ್ಬ ಕಾರ್ಮಿಕ ಎಡವಿ 20 ಅಡಿ ಆಳದ ಚರಂಡಿಗೆ ಬಿದ್ದಿದ್ದಾನೆ. ಅವನನ್ನು ಉಳಿಸಲು ಹೋಗಿ ಮತ್ತಿಬ್ಬರು ಕಾರ್ಮಿಕರು ಚರಂಡಿಯೊಳಗೆ ಬಿದ್ದಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಒಂದು ಗಂಟೆಗಳ ಕಾಲ ರಕ್ಷಣಾ ಕಾರ್ಯಾಚರಣೆ ನಡೆಸಿದ ವಿಪತ್ತು ನಿರ್ವಹಣಾ ಪಡೆ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಮೃತದೇಹಗಳನ್ನು ಹೊರತೆಗೆದಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಫರ್ಜಾನ್ ಶೇಖ್, ಹಸಿ ಶೇಖ್ ಮತ್ತು ಸುಮನ್ ಸರ್ದಾರ್ ಮೃತರು.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೌರಾಡಳಿತ ಸಚಿವ ಫಿರ್ಹಾದ್ ಹಕೀಮ್, ಕಾರ್ಮಿಕರ ಸಾವು ದುರದೃಷ್ಟಕರ ಮತ್ತು ದುರಂತ ಎಂದು ಸಂತಾಪ ಸೂಚಿಸಿದ್ದಾರೆ.
‘ದುರಂತಕ್ಕೆ ಕಾರಣರಾದವರ ಪತ್ತೆಗೆ ರಾಜ್ಯ ಸರ್ಕಾರ ತನಿಖೆ ನಡೆಸಲಿದೆ. ಸ್ವಚ್ಛತೆ ಕಾರ್ಯದಲ್ಲಿ ತೊಡಗಿದ್ದ ಏಜೆನ್ಸಿ ಹಾಗೂ ಗುತ್ತಿಗೆದಾರರು ಎಲ್ಲ ಅಗತ್ಯ ಮಾರ್ಗಸೂಚಿಗಳನ್ನು ಅನುಸರಿಸಿದ್ದಾರೆಯೇ ಎಂಬುದರ ಕುರಿತು ವಿಚಾರಣೆ ನಡೆಸಿ ಹೊಣೆಗಾರರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಮೃತರ ಕುಟುಂಬಕ್ಕೆ ರಾಜ್ಯ ಸರ್ಕಾರ ಪರಿಹಾರ ನೀಡಲಿದೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.