ADVERTISEMENT

ವೇತನ, ನಿಧಿಗೆ ಕತ್ತರಿ:ರಾಷ್ಟ್ರಪತಿ, ಉಪರಾಷ್ಟ್ರಪತಿ ವೇತನದಲ್ಲೂ ಶೇ 30ರಷ್ಟು ಕಡಿತ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2020, 22:17 IST
Last Updated 6 ಏಪ್ರಿಲ್ 2020, 22:17 IST
   
""

ನವದೆಹಲಿ:ಕೋವಿಡ್–19 ವಿರುದ್ಧದ ಹೋರಾಟಕ್ಕೆ ನಿಧಿ ಸಂಗ್ರಹಿಸುವ ಉದ್ದೇಶದಿಂದ ರಾಷ್ಟ್ರಪತಿ, ಪ್ರಧಾನಿ, ಉಪರಾಷ್ಟ್ರಪತಿ, ಎಲ್ಲಾ ರಾಜ್ಯಪಾಲರು ಮತ್ತು ಎಲ್ಲಾ ಸಂಸದರ ವೇತನದಲ್ಲಿ ಶೇ 30ರಷ್ಟು ಕಡಿತವಾಗಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಸೋಮವಾರ ವಿಡಿಯೊ ಸಂವಾದದ ಮೂಲಕ ನಡೆದ ಸಂಪುಟ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಇದಕ್ಕಾಗಿ ‘ಸಂಸತ್ ಸದಸ್ಯರ ವೇತನ, ಭತ್ಯೆಗಳು ಮತ್ತು ಪಿಂಚಣಿ ಕಾಯ್ದೆ–1954ಕ್ಕೆ’ ತಿದ್ದುಪಡಿ ತರುವ ಸುಗ್ರೀವಾಜ್ಞೆಯನ್ನು ಜಾರಿಗೆ ತರಲಾಗಿದೆ.2020ರ ಏಪ್ರಿಲ್ 1ರಿಂದ ಇದು ಅನ್ವಯವಾಗಲಿದೆ.

ಕೋವಿಡ್–19 ವಿರುದ್ಧದ ಹೋರಾಟಕ್ಕೆ ದೊಡ್ಡ ಮೊತ್ತದ ಹಣ ಅಗತ್ಯವಿದೆ. ಇದಕ್ಕಾಗಿ ಸಂಸತ್ ಸದಸ್ಯರ ವೇತನದಲ್ಲಿ ಕಡಿತ ಮಾಡಲಾಗುತ್ತಿದೆ. ಇದರಿಂದ ನಿಧಿ ಸಂಗ್ರಹಕ್ಕೆ ಅನುಕೂಲವಾಗಲಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಮಾಹಿತಿ ನೀಡಿದ್ದಾರೆ.

ADVERTISEMENT

* 2020ರ ಏಪ್ರಿಲ್ 1ರಿಂದ ಒಂದು ವರ್ಷದವರೆಗೆ ವೇತನ ಕಡಿತ ಜಾರಿಯಲ್ಲಿ ಇರಲಿದೆ

* ಸಂಸದರ ಭತ್ಯೆಗಳು ಮತ್ತು ಪಿಂಚಣಿಯಲ್ಲಿ ಯಾವುದೇ ಕಡಿತ ಇರುವುದಿಲ್ಲ

* ಲೋಕಸಭೆ ಮತ್ತು ರಾಜ್ಯಸಭೆ ಸದಸ್ಯರ ವಾರ್ಷಿಕ ‘ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿ’ಯನ್ನು (ಎಂಪಿಎಲ್‌ಎಡಿಎಸ್‌) ಎರಡು ಆರ್ಥಿಕ ವರ್ಷಗಳಮಟ್ಟಿಗೆ ಸ್ಥಗಿತಗೊಳಿಸಲಾಗುತ್ತಿದೆ

* ಎಂಪಿಎಲ್‌ಎಡಿ ನಿಧಿಯನ್ನು 2020–21 ಮತ್ತು 2021–22ನೇ ಸಾಲಿನ ಆರ್ಥಿಕ ಅವಧಿಯಲ್ಲಿ ನೀಡಲಾಗುವುದಿಲ್ಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.