ADVERTISEMENT

ಉತ್ತರಾಖಂಡದಲ್ಲಿ ಹಿಮಪಾತ: ಭಾರತೀಯ ನೌಕಾಪಡೆಯ ಐವರು ಪರ್ವತಾರೋಹಿಗಳು ನಾಪತ್ತೆ

ಪಿಟಿಐ
Published 1 ಅಕ್ಟೋಬರ್ 2021, 16:51 IST
Last Updated 1 ಅಕ್ಟೋಬರ್ 2021, 16:51 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಗೋಪೇಶ್ವರ: ಉತ್ತರಾಖಂಡದ ಬಾಗೇಶ್ವರ ಜಿಲ್ಲೆಯ ತ್ರಿಶೂಲ್ ಶಿಖರವನ್ನು ಏರಲು ಮುಂದಾದಾಗ ಉಂಟಾದ ಹಿಮಪಾತದಲ್ಲಿ ಭಾರತೀಯ ನೌಕಾಪಡೆಯ ಐವರು ಪರ್ವತಾರೋಹಿಗಳು ಮತ್ತು ಸಹಾಯಕ ಸಿಬ್ಬಂದಿಯೊಬ್ಬರು ನಾಪತ್ತೆಯಾಗಿದ್ದಾರೆ ಎಂದು ಶುಕ್ರವಾರ ಅಧಿಕಾರಿಗಳು ತಿಳಿಸಿದ್ದಾರೆ.

ಕಾಣೆಯಾದವರನ್ನು ಹುಡುಕಲು ಉತ್ತರಕಾಶಿ ಮೂಲದ ನೆಹರು ಇನ್‌ಸ್ಟಿಟ್ಯೂಟ್ ಆಫ್ ಮೌಂಟೈನರಿಂಗ್‌ನ ಪ್ರಾಂಶುಪಾಲ ಕರ್ನಲ್ ಅಮಿತ್ ಬಿಶ್ತ್ ನೇತೃತ್ವದ ರಕ್ಷಣಾ ತಂಡವು ಹಿಮಪಾತ ಪೀಡಿತ ಪ್ರದೇಶಕ್ಕೆ ತೆರಳಿದೆ ಎಂದು ಎನ್ಐಎಂನ (ನೌಕಾಪಡೆಯ ಮಾಹಿತಿ ನಿರ್ವಹಣಾ ವಿಭಾಗ) ಹೇಳಿಕೆಯಲ್ಲಿ ಹೇಳಲಾಗಿದೆ.

ರಕ್ಷಕರ ತಂಡವು ಜೋಶಿಮಠವನ್ನು ತಲುಪಿದೆ ಆದರೆ ಕೆಟ್ಟ ಹವಾಮಾನದಿಂದಾಗಿ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ADVERTISEMENT

ಭಾರತೀಯ ಸೇನೆ, ವಾಯುಪಡೆ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ಸಂಯೋಜಿತ ತಂಡವು ಹೆಲಿಕಾಪ್ಟರ್ ನೆರವಿನಿಂದ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ ಎಂದು ಅದು ಹೇಳಿದೆ.

ತ್ರಿಶೂಲ್ ಶಿಖರವು ಉತ್ತರಾಖಂಡದ ಬಾಗೇಶ್ವರ ಜಿಲ್ಲೆಯಲ್ಲಿರುವ ಮೂರು ಹಿಮಾಲಯ ಶಿಖರಗಳ ಒಂದು ಗುಂಪು.

ಭಾರತೀಯ ನೌಕಾಪಡೆಯ ಸಾಹಸ ವಿಭಾಗವು ಬೆಳಿಗ್ಗೆ 11 ಗಂಟೆ ಸುಮಾರಿಗೆ ಎನ್ಐಎಂ ಅಧಿಕಾರಿಗಳಿಗೆ ಮಾಹಿತಿ ನೀಡಿತು ಮತ್ತು ಸಂಸ್ಥೆಯ ಶೋಧ ಮತ್ತು ರಕ್ಷಣಾ ತಂಡದ ಸಹಾಯವನ್ನು ಕೋರಿತು.

ಲಭ್ಯವಿರುವ ಮಾಹಿತಿ ಪ್ರಕಾರ, ಭಾರತೀಯ ನೌಕಾಪಡೆಯ 20 ಸದಸ್ಯರ ತಂಡವು 15 ದಿನಗಳ ಹಿಂದೆ 7,120 ಮೀಟರ್ ಎತ್ತರದ ತ್ರಿಶೂಲ್ ಪರ್ವತಕ್ಕೆ ಆರೋಹಣ ಕೈಗೊಂಡಿತ್ತು. ಶುಕ್ರವಾರ ಬೆಳಿಗ್ಗೆ 5 ಗಂಟೆ ಸುಮಾರಿಗೆ ಹಿಮಪಾತ ಸಂಭವಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.