ADVERTISEMENT

ನಿತೀಶ್ ಬೆಂಗಾವಲು ಪಡೆ ಮೇಲೆ ಕಲ್ಲು ತೂರಾಟ

ಪಿಟಿಐ
Published 12 ಜನವರಿ 2018, 19:10 IST
Last Updated 12 ಜನವರಿ 2018, 19:10 IST

ಬಕ್ಸಾರ್, ಬಿಹಾರ : ‘ವಿಕಾಸ ಸಮೀಕ್ಷಾ ಯಾತ್ರೆ’ ಕೈಗೊಂಡಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಗ್ರಾಮವೊಂದಕ್ಕೆ ತೆರಳುತ್ತಿದ್ದಾಗ ಅವರ ಬೆಂಗಾವಲು ಪಡೆ ಮೇಲೆ ಶುಕ್ರವಾರ ಕಲ್ಲು ತೂರಾಟ ನಡೆದಿದೆ. ನಿತೀಶ್ ಅವರಿಗೆ ಯಾವುದೇ ಗಾಯವಾಗಿಲ್ಲ.

‘ಮುಖ್ಯಮಂತ್ರಿಗಳ ಬೆಂಗಾವಲು ಪಡೆ ಮೇಲೆ ಕೆಲವರು ಕಲ್ಲು ತೂರಿದರೂ, ಇದರಿಂದ ಕಾರ್ಯಕ್ರಮಕ್ಕೆ ಅಡೆತಡೆ ಆಗಲಿಲ್ಲ. ₹272 ಕೋಟಿ ವೆಚ್ಚದ ವಿವಿಧ ಯೋಜನೆಗಳಿಗೆ ಚಾಲನೆ ನೀಡಿ ಸಾರ್ವಜನಿಕ ಭಾಷಣ ಮಾಡುವುದಕ್ಕೂ ಮುನ್ನ ಈ ಘಟನೆ ನಡೆಯಿತು’ ಎಂದು ನಿತೀಶ್ ಅವರ ಜೊತೆಗಿದ್ದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಲ್ಲೂ ತೂರಾಟ ನಡೆಸಿದವರು ಯಾರು ಮತ್ತು ಅವರ ಉದ್ದೇಶ ಏನಾಗಿತ್ತು ಎಂಬ ಬಗ್ಗೆ ತಿಳಿದುಬಂದಿಲ್ಲ.

ADVERTISEMENT

‘ರಾಜ್ಯದಲ್ಲಿ ನಾನು ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳ ಬದ್ಧತೆಯಿಂದ ಕೆಲವರು ಗೊಂದಲಕ್ಕೀಡಾಗಿದ್ದಾರೆ. ಅವರು ಜನರನ್ನು ದಾರಿ ತಪ್ಪಿಸುವ ಹಾಗೂ ಪ್ರಚೋದಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ ಜನರು ಇಂತಹ ಚಿಕ್ಕಪುಟ್ಟ ಘಟನೆಗಳಿಂದ ಬೇಸರ ಮಾಡಿಕೊಳ್ಳಬಾರದು’ ಎಂದು ನಿತೀಶ್ ಹೇಳಿದ್ದಾರೆ.

‘ರಾಜಧಾನಿಯಲ್ಲಿ ಕುಳಿತು ಸರ್ಕಾರವನ್ನು ಮುನ್ನಡೆಸುವುದು ನನ್ನ ಉದ್ದೇಶವಲ್ಲ. ತಳಮಟ್ಟದ ವಾಸ್ತವ ಸ್ಥಿತಿ ಹಾಗೂ ರಸ್ತೆ, ಕುಡಿಯುವ ನೀರು, ವಿದ್ಯುತ್ ಪೂರೈಕೆಯಂತಹ ಅಭಿವೃದ್ಧಿ ಕೆಲಸಗಳನ್ನು ಅರಿಯಲು ನಾನು ಬಯಸುತ್ತೇನೆ. ಯಾರಾದರೂ ನನ್ನ ಅಭಿಯಾನವನ್ನು ಮತ್ತು ಜನರನ್ನು ದಾರಿ ತಪ್ಪಿಸಲು ಯತ್ನಿಸಿದರೆ, ರಾಜ್ಯದ ಪ್ರಗತಿಯೇ ಅವರಿಗೆ ಉತ್ತರ ನೀಡಲಿದೆ’ ಎಂದೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.