ನವದೆಹಲಿ: ಸಮಾನತೆ, ಜಾತ್ಯತೀತತೆಯೇ ಭಾರತದ ಆಧಾರ ಸ್ತಂಭಗಳು ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೇಳಿದರು.
ಗಣರಾಜ್ಯೋತ್ಸವದ ಮುನ್ನಾ ದಿನವಾದ ಗುರುವಾರ ರಾತ್ರಿ ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದ ಅವರು, ‘ಪ್ರಜೆಗಳು ದೇಶದ ಬುನಾದಿಯಾಗಿದ್ದಾರೆ. ಇದು ಸ್ವಾತಂತ್ರ್ಯ ಹೋರಾಟಗಾರರನ್ನು, ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದವರನ್ನು ನೆನೆಸಿಕೊಳ್ಳಬೇಕಾದ ದಿನ’ ಎಂದು ಹೇಳಿದರು. ಅಲ್ಲದೆ, ಯೋಧರು, ವೈದ್ಯರು, ರೈತರು, ಇಂಜಿನಿಯರ್ಗಳು ಮತ್ತು ದೇಶದ ಎಲ್ಲ ತಾಯಂದಿರಿಗೆ ಧನ್ಯವಾದ ಸಮರ್ಪಿಸಿದರು.
‘ಭಾರತ ಈಗ ಯುವ ದೇಶ. ಇಲ್ಲಿನ ಶೇಕಡಾ 60ಕ್ಕಿಂತಲೂ ಹೆಚ್ಚು ಜನ 35 ವರ್ಷ ವಯಸ್ಸಿಗಿಂತ ಕೆಳಗಿನವರು. ಯುವಕರಿಂದ ಕೂಡಿದ ದೇಶ ಈಗ ನವಭಾರತವಾಗುತ್ತಿದೆ’ ಎಂದೂ ರಾಷ್ಟ್ರಪತಿ ಹೇಳಿದರು.
ನಮ್ಮ ಸಮಾಜವು ಪರಸ್ಪರರಿಗೆ ಸಹಾಯ ಮಾಡುವ ತತ್ವದ ಮೇಲೆ ಅವಲಂಬಿತವಾಗಿದೆ. ವಿದೇಶದಲ್ಲಿರುವ ಭಾರತೀಯರಿಗೆ ಸಂಕಷ್ಟ ಎದುರಾದಾಗ ನಾವು ಅವರ ಸಹಾಯಕ್ಕೆ ಮುಂದಾಗುತ್ತೇವೆ. ಉತ್ತಮ ರಾಷ್ಟ್ರ ನಿರ್ಮಾಣಕ್ಕಾಗಿ ನಾವು ಕೆಲಸ ಮಾಡಬೇಕಿದೆ. ಇದಕ್ಕಾಗಿ ಪ್ರತಿಯೊಬ್ಬ ವ್ಯಕ್ತಿಯು ತನ್ನೆಲ್ಲ ಸಾಮರ್ಥ್ಯ ಬಳಸಿ ಕೆಲಸ ಮಾಡಬೇಕು ಎಂದು ರಾಷ್ಟ್ರಪತಿಗಳು ಹೇಳಿದರು.
ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ, ನಮ್ಮ ಸಹಾಯ ಬಯಸುವ ಅನೇಕ ಜನ ಇದ್ದಾರೆ. ಜೀವನವನ್ನು ಸುಧಾರಿಸುವುದು ನಮ್ಮ ಪ್ರಮುಖ ಜವಾಬ್ದಾರಿಯಾಗಿದೆ ಎಂದು ಕೋವಿಂದ್ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.