ಶ್ರೀನಗರ: ಕಾಶ್ಮೀರದ ಕುಪ್ವಾರ ಮತ್ತು ಗಾಂಧರ್ಬಲ್ ಜಿಲ್ಲೆಗಳಲ್ಲಿ ಭಾರಿ ಹಿಮಕುಸಿತ ಸಂಭವಿಸಿದ್ದು, ಆರು ಮಂದಿ ಯೋಧರು ಹಾಗೂ ಆರು ಮಂದಿ ನಾಗರಿಕರು ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಕುಪ್ವಾರ ಜಿಲ್ಲೆಯ ಮಾಚಿಲ್ ಪ್ರದೇಶದ ಶಹಾಪುರ ಗಡಿ ನಿಯಂತ್ರಣ ರೇಖೆಯ (ಎಲ್ಒಸಿ) ಸಮೀಪದಲ್ಲಿ ಸಂಭವಿಸಿದ ಹಿಮಪಾತದಲ್ಲಿ ಐವರು ಯೋಧರು ಸಿಲುಕಿಕೊಂಡಿದ್ದರು. ಇವರಲ್ಲಿ ಮೂವರು ಯೋಧರು ಮೃತಪಟ್ಟಿದ್ದರೆ, ಒಬ್ಬ ಯೋಧ ಕಾಣೆಯಾಗಿದ್ದಾರೆ. ಮತ್ತೋರ್ವ ಯೋಧ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸೇನೆಯ ಅಧಿಕಾರಿ ತಿಳಿಸಿದ್ದಾರೆ.
ನೌಗಾಮ್ ಪ್ರದೇಶದಲ್ಲಿ ಸಂಭವಿಸಿದ ಹಿಮಕುಸಿತಕ್ಕೆ ಬಿಎಸ್ಎಫ್ ಯೋಧ ಮೃತಪಟ್ಟಿದ್ದು, 6 ಮಂದಿಯನ್ನು ರಕ್ಷಿಸಲಾಗಿದೆ. ಗಗನ್ಗಿರ್ ಗ್ರಾಮದಲ್ಲಿ ಸಂಭವಿಸಿದ ಮತ್ತೊಂದು ಹಿಮಕುಸಿತದಲ್ಲಿ ಐವರು ನಾಗರಿಕರು ಮೃತಪಟ್ಟಿದ್ದಾರೆ. ಹಿಮದಡಿ ಸಿಲುಕಿಕೊಂಡಿದ್ದ ನಾಲ್ವರನ್ನು ರಕ್ಷಿಸಲಾಗಿದೆ. ಸೋಮವಾರ ತಡರಾತ್ರಿ ಘಟನೆಯು ನಡೆದಿದೆ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.