ಕಾನ್ಪುರ: ಉತ್ತರಪ್ರದೇಶದ ಕನೌಜ್ ಜಿಲ್ಲೆಯ ಸಿಲೌಪುರ ಗ್ರಾಮದಲ್ಲಿ ₹66,000 ಮೌಲ್ಯದ ಕರೆನ್ಸಿ ನೋಟುಗಳನ್ನು ಆಡು ತಿಂದ ಘಟನೆ ನಡೆದಿದೆ.
ಸರ್ವೇಶ್ ಕುಮಾರ್ ಪಾಲ್ ಎಂಬ ರೈತ ತನ್ನ ಪ್ಯಾಂಟ್ ಪಾಕೆಟ್ನಲ್ಲಿ 66,000 ರೂಪಾಯಿಗಳನ್ನಿರಿಸಿ ಸ್ನಾನ ಮಾಡಲು ಹೋಗಿದ್ದರು.₹2000 ಮುಖಬೆಲೆಯ ನೋಟಿನ ಕಂತೆಗಳಾಗಿದ್ದವು ಅವು.
'ಸ್ನಾನ ಮುಗಿಸಿ ಬರುವಾಗ ನಮ್ಮ ಮನೆಯದ್ದೇ ಆಡು ಕರೆನ್ಸಿ ನೋಟುಗಳನ್ನು ತಿನ್ನತೊಡಗಿದೆ. ಓಡೋಡಿ ಬಂದು ಆಡನ್ನು ಅಲ್ಲಿಂದ ಓಡಿಸಿದರೂ ₹2000 ಮುಖಬೆಲೆಯ ಎರಡೇ ಎರಡು ನೋಟು ಸಿಕ್ಕಿದೆ. ಅದೂ ಪೂರ್ತಿ ಹರಿದು ಹೋಗಿದ ಸ್ಥಿತಿಯಲ್ಲಿತ್ತು. ₹2000 ಮುಖಬೆಲೆಯ ಮೂವತ್ತೊಂದು ನೋಟುಗಳನ್ನು ಆಡು ಆಗಲೇ ತಿಂದಾಗಿತ್ತು ಎಂದಿದ್ದಾರೆ ಸರ್ವೇಶ್.
ನೋಟುಗಳನ್ನು ಆಡು ತಿಂದು ತೇಗಿರುವ ಸುದ್ದಿ ತಿಳಿಯುತ್ತಿದ್ದಂತೆ ನೆರೆಹೊರೆಯವರೆಲ್ಲಾ ಸರ್ವೇಶ್ ಮನೆಗೆ ಬಂದು ಆಡಿನ ಜತೆ ಸೆಲ್ಫಿ ತೆಗೆದುಕೊಂಡಿದ್ದಾರೆ. ಇನ್ನು ಕೆಲವರು ನೋಟು ತಿಂದ ಆಡು ದೌರ್ಭಾಗ್ಯ ತರುತ್ತದೆ. ಅದನ್ನು ಕಸಾಯಿಖಾನೆಗೆ ಮಾರಿ ಬಿಡಿ ಎಂದು ಸಲಹೆ ನೀಡಿದ್ದಾರೆ.
ಆದರೆ ಪ್ರಾಣಿಗಳ ಮೇಲೆ ಹಿಂಸೆ ಮಾಡುವುದು ಸರಿಯಲ್ಲ, ಅವುಗಳನ್ನು ನಾನು ಮಕ್ಕಳಂತೆ ನೋಡಿಕೊಳ್ಳುತ್ತಿದ್ದೇನೆ ಎಂದು ಸರ್ವೇಶ್ ಪ್ರತಿಕ್ರಿಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.