ADVERTISEMENT

ಗಣರಾಜ್ಯೋತ್ಸವ: ಮುಖ್ಯ ಅತಿಥಿ ಈಜಿಪ್ಟ್ ಅಧ್ಯಕ್ಷ ಅಬ್ದುಲ್ ಫತ್ತಾಹ ಇಂದು ದೆಹಲಿಗೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಜನವರಿ 2023, 10:51 IST
Last Updated 24 ಜನವರಿ 2023, 10:51 IST
ಅಬ್ದುಲ್ ಫತ್ತಾಹ ಅಲ್ ಸಿಸಿ
ಅಬ್ದುಲ್ ಫತ್ತಾಹ ಅಲ್ ಸಿಸಿ   

ನವದೆಹಲಿ: 74ನೇ ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಈಜಿಪ್ಟ್ ಅಧ್ಯಕ್ಷ ಅಬ್ದುಲ್ ಫತ್ತಾಹ ಅಲ್ ಸಿಸಿ ಅವರನ್ನು ಆಹ್ವಾನಿಸಲಾಗಿದ್ದು, ಅವರು ಇಂದು ಸಂಜೆ ದೆಹಲಿಗೆ ಆಗಮಿಸಲಿದ್ದಾರೆ.

ಅಬ್ದುಲ್ ಫತ್ತಾಹ ಅವರ ಅಧಿಕೃತ ಭೇಟಿಗಾಗಿ ಐವರು ಸಚಿವರು ಮತ್ತು ಹಿರಿಯ ಅಧಿಕಾರಿಗಳು ಸೇರಿದಂತೆ ಉನ್ನತ ಮಟ್ಟದ ನಿಯೋಗ ಅವರೊಂದಿಗೆ ಬಂದಿಳಿಯಲಿದೆ.

ಭಾರತದ ಗಣರಾಜ್ಯೋತ್ಸವದ ಪ್ರಯುಕ್ತ ಮುಖ್ಯ ಅತಿಥಿಯಾಗಿ ಈಜಿಪ್ಟ್ ಅಧ್ಯಕ್ಷರನ್ನು ಆಹ್ವಾನಿಸಿರುವುದು ಇದೇ ಮೊದಲು.

ADVERTISEMENT

ಅಬ್ದುಲ್ ಫತ್ತಾಹ ಅವರಿಗೆ ನಾಳೆ (ಬುಧವಾರ) ರಾಷ್ಟ್ರಪತಿ ಭವನದಲ್ಲಿ ವಿಧ್ಯುಕ್ತ ಸ್ವಾಗತ ಕೋರಲಾಗುವುದು ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.

ಅಬ್ದುಲ್ ಫತ್ತಾಹ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಮತ್ತು ವಿದೇಶಾಂಗ ಸಚಿವ ಎಸ್ ಜೈಶಂಕರ್ ಸೇರಿದಂತೆ ಇತರರನ್ನು ಭೇಟಿಯಾಗಲಿದ್ದಾರೆ.

ಗಣರಾಜ್ಯೋತ್ಸವದಂದು ರಾಜಪಥದಲ್ಲಿ ನಡೆಯಲಿರುವ ಪರೇಡ್‌ಗೆ ಮುಖ್ಯ ಅತಿಥಿಯಾಗಿ ಅಬ್ದುಲ್ ಫತ್ತಾಹ ಸಾಕ್ಷಿಯಾಗಲಿದ್ದಾರೆ. ಜತೆಗೆ ಈಜಿಪ್ಟ್ ಸೇನಾ ತುಕಡಿಯು ಪರೇಡ್‌ನಲ್ಲಿ ಭಾಗವಹಿಸಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಗಣರಾಜ್ಯೋತ್ಸವ ಕಾರ್ಯಕ್ರಮ ಮುಗಿದ ಬಳಿಕ ಅಬ್ದುಲ್, ದೆಹಲಿಯ ರಾಜ್‌ಘಾಟ್‌ನಲ್ಲಿರುವ ಮಹಾತ್ಮ ಗಾಂಧಿಯವರ ಸ್ಮಾರಕಕ್ಕೆ ಭೇಟಿ ನೀಡಿದ್ದಾರೆ. ಬಳಿಕ ಪ್ರಧಾನಿ ಮೋದಿ ಅವರೊಂದಿಗೆ ಸಭೆ ನಡೆಸಲಿದ್ದು, ದ್ವಿಪಕ್ಷೀಯ ಮಾತುಕತೆ ಸೇರಿದಂತೆ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಕುರಿತು ಚರ್ಚಿಸಲಿದ್ದಾರೆ.

ಸಂಜೆ ವೇಳೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆಯೋಜಿಸಿರುವ ಔತಣಕೂಟದಲ್ಲಿ ಅಬ್ದುಲ್ ಭಾಗಿಯಾಗಲಿದ್ದಾರೆ. ಜನವರಿ 27ರಂದು ಅಬ್ದುಲ್, ಈಜಿಪ್ಟ್‌ಗೆ ಮರಳಲಿದ್ದಾರೆ.

ಗಣರಾಜ್ಯೋತ್ಸವ ಸಾರ್ವಜನಿಕರಿಗೆ ಸೀಮಿತ ಅವಕಾಶ
ನವದೆಹಲಿ:
ಈ ವರ್ಷದ ಗಣರಾಜ್ಯೋತ್ಸವದ ಪರೇಡ್‌ ವೀಕ್ಷಣೆಗೆ ಸಾರ್ವಜನಿಕರ ಉಪಸ್ಥಿತಿಯನ್ನು ಕೋವಿಡ್ ಪೂರ್ವದ ದಿನಗಳಿಗೆ ಹೋಲಿಸಿದರೆ ಶೇ 50ಕ್ಕಿಂತಲೂ ಹೆಚ್ಚು ಕಡಿತಗೊಳಿಸಲಾಗುತ್ತಿದೆ ಎಂದು ರಕ್ಷಣಾ ಸಚಿವಾಲಯ ಬುಧವಾರ ತಿಳಿಸಿದೆ.

‘ಕೋವಿಡ್ ಪೂರ್ವದಲ್ಲಿ ಲಕ್ಷಕ್ಕೂ ಹೆಚ್ಚು ಸಂಖ್ಯೆಯಲ್ಲಿ ಸೇರುತ್ತಿದ್ದರು. ಇದನ್ನು ಈ ಬಾರಿ 45,000ಕ್ಕೆ ಕಡಿತಗೊಳಿಸಲಾಗಿದೆ’ ಎಂದು ‌‌ರಕ್ಷಣಾ ಕಾರ್ಯದರ್ಶಿ ಗಿರಿಧರ್ ಅರಮನೆ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.