ADVERTISEMENT

ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕಾಗಿ 75 ‘ಹುನರ್ ಹಾಥ್’ ಯೋಜನೆ: ಸಚಿವ ನಖ್ವಿ

7,50,000 ಕುಶಲಕರ್ಮಿಗಳಿಗೆ ಉದ್ಯೋಗಾವಕಾಶ

ಪಿಟಿಐ
Published 9 ಆಗಸ್ಟ್ 2022, 7:16 IST
Last Updated 9 ಆಗಸ್ಟ್ 2022, 7:16 IST
ಮುಖ್ತಾರ್ ಅಬ್ಬಾಸ್ ನಖ್ವಿ
ಮುಖ್ತಾರ್ ಅಬ್ಬಾಸ್ ನಖ್ವಿ   

ನವದೆಹಲಿ: ಭಾರತಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷಗಳಾದ ನೆನಪಿಗೆ ದೇಶದಾದ್ಯಂತ ನುರಿತ ಕುಶಲಕರ್ಮಿಗಳನ್ನು ಪ್ರೋತ್ಸಾಹಿಸಲು ‘75 ಹುನರ್ ಹಾಥ್’ ಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಸೋಮವಾರ ತಿಳಿಸಿದರು.

‘ಸ್ವಾತಂತ್ರ್ಯದ ಅಮೃತ ಮಹೋತ್ಸವ’ದ ಅಡಿಯಲ್ಲಿ ಈ ಯೋಜನೆಯನ್ನು ಜಾರಿಗೊಳಿಸಲಾಗುವುದು. ಈ ಯೋಜನೆ ಮೂಲಕ ದೇಶದಾದ್ಯಂತ 7.5 ಲಕ್ಷ ನುರಿತ ಕುಶಲಕರ್ಮಿಗಳಿಗೆ ಉದ್ಯೋಗಾವಕಾಶ ಕಲ್ಪಿಸಿಕೊಡಲಾಗುವುದು’ ಎಂದು ಅವರು ವಿವರಿಸಿದರು.

‘ಹುನರ್ ಹಾಥ್‌’ ಯೋಜನೆಯಲ್ಲಿ ದೇಶದ ಎಲ್ಲ ಭಾಗಗಳ ಕುಶಲಕರ್ಮಿಗಳು ತಮ್ಮ ಕೈಯಿಂದ ತಯಾರಿಸಿದ ಸ್ವದೇಶಿ ಉತ್ಪನ್ನಗಳನ್ನು ಪ್ರದರ್ಶಿಸುವ ಮತ್ತು ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗುವುದು. ಅಂತೆಯೇ ‘ಬಾವರ್ಚಿ ಖಾನ’ ಕಾರ್ಯಕ್ರಮದಲ್ಲಿ ವಿವಿಧ ಪ್ರದೇಶಗಳ ಸಾಂಪ್ರದಾಯಿಕ ಪಾಕಪದ್ಧತಿ ಅರಿಯುವ ಮತ್ತು ಭಕ್ಷ್ಯಗಳನ್ನು ಸವಿಯುವ ಅವಕಾಶವೂ ಇದೆ’ ಎಂದರು.

ADVERTISEMENT

ಅಮೃತ ಮಹೋತ್ಸವ ಉದ್ಯಾನ: ಪ್ರಧಾನ ಮಂತ್ರಿ ಜನವಿಕಾಸ್ ಕಾರ್ಯಕ್ರಮ ಹಾಗೂ ವಕ್ಫ್ ತರಕ್ಕಿಯಾತ್ ಯೋಜನೆ ಸಹಯೋಗದಲ್ಲಿ ಖಾಲಿ ಇರುವ ವಕ್ಘ್ ಪ್ರದೇಶಗಳಲ್ಲಿ 75 ಅಮೃತ ಮಹೋತ್ಸವ ಉದ್ಯಾನಗಳನ್ನು ರೂಪಿಸಲಾಗುವುದು. ‘ಅಮೃತ ಮಹೋತ್ಸವ’ದ ಅಡಿಯಲ್ಲಿ ದೇಶದಾದ್ಯಂತ 2023ರವರೆಗೆ ‘ಮೇರಾ ವತನ್, ಮೇರಾ ಚಮನ್’ ಮುಷೈರಾ ಮತ್ತು ಕವಿ ಗೋಷ್ಠಿಗಳನ್ನು ಆಯೋಜಿಸಲಾಗುವುದು’ ಎಂದೂ ನಖ್ವಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.