ADVERTISEMENT

ರಾಯಪುರ: ಹತ್ತು ನಕ್ಸಲರ ಹತ್ಯೆ

ಪಿಟಿಐ
Published 2 ಏಪ್ರಿಲ್ 2024, 16:19 IST
Last Updated 2 ಏಪ್ರಿಲ್ 2024, 16:19 IST
   

ರಾಯಪುರ: ಛತ್ತೀಸಗಢದ ಬಿಜಾಪುರ ಜಿಲ್ಲೆಯಲ್ಲಿ ಮಂಗಳವಾರ ಭದ್ರತಾ ಸಿಬ್ಬಂದಿ ಜೊತೆ ನಡೆದ ಗುಂಡಿನ ಚಕಮಕಿಯಲ್ಲಿ ಮಹಿಳೆ ಸೇರಿದಂತೆ 10 ನಕ್ಸಲರು ಹತ್ಯೆಗೀಡಾಗಿದ್ದಾರೆ.  

ಜಿಲ್ಲೆಯ ಲೆಂದ್ರಾ ಬಳಿಯ ಅರಣ್ಯದಲ್ಲಿ ನಕ್ಸಲ್‌ ನಿಗ್ರಹ ಪಡೆ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ, ಸುದೀರ್ಘಾವಧಿ ಗುಂಡಿನ ಚಕಮಕಿ ನಡೆಯಿತು ಎಂದು ಐಜಿಪಿ ಸುಂದರರಾಜ್‌ ತಿಳಿಸಿದ್ದಾರೆ.

ಗುಂಡಿನ ಚಕಮಕಿಯ ಬಳಿಕ ಮೊದಲಿಗೆ ನಾಲ್ವರು ನಕ್ಸಲರ ಶವಗಳು ಕಂಡುಬಂದವು. ಶೋಧ ಮುಂದುವರಿಸಿದಾಗ ಮತ್ತೆ ಆರು ನಕ್ಸಲರ ಶವಗಳು ಪತ್ತೆಯಾದವು ಎಂದು ಅವರು ತಿಳಿಸಿದ್ದಾರೆ.

ADVERTISEMENT

ಮಷಿನ್‌ ಗನ್, ಪಾಯಿಂಟ್ 303 ರೈಫಲ್, 12 ಬೋರ್ ಗನ್, ಗ್ರನೇಡ್‌ ಲಾಂಚರ್ ಮತ್ತು ಶೆಲ್‌ಗಳು ಹಾಗೂ ಇತರೆ ಶಸ್ತ್ರಾಸ್ತ್ರಗಳನ್ನು ಚಕಮಕಿ ನಡೆದ ಸ್ಥಳದಿಂದ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಶೋಧ ಕಾರ್ಯ ಮುಂದುವರಿದಿದೆ. ಮೃತ ನಕ್ಸಲರ ಗುರುತು ಪತ್ತೆಯಾಗಿಲ್ಲ. ಇವರು, ಮಾವೋವಾದಿಗಳ ಪೀಪಲ್ಸ್ ಲಿಬರೇಷನ್ ಗೆರಿಲ್ಲಾ ಪಡೆಯ ಸದಸ್ಯರು ಎಂದು ಮೇಲ್ಕೋಟಕ್ಕೆ ಗೊತ್ತಾಗಿದೆ ಎಂದು ತಿಳಿಸಿದ್ದಾರೆ.

ಜಿಲ್ಲಾ ಮೀಸಲು ಪಡೆ, ವಿಶೇಷ ಕಾರ್ಯಪಡೆ, ಕೇಂದ್ರೀಯ ಮೀಸಲು ಪೊಲೀಸ್ ಪಡೆ ಮತ್ತು ಅದರ ಕೋಬ್ರಾ ಪಡೆ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿದ್ದರು ಎಂದು ಐಜಿಪಿ ಮಾಹಿತಿ ನೀಡಿದರು.

ನಕ್ಸಲ್‌ ಬಾಧಿತ ಪ್ರದೇಶವಾದ ಬಿಜಾಪುರ್ ಜಿಲ್ಲೆಯು ಬಸ್ತಾರ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರಲಿದೆ. ಈ ಕ್ಷೇತ್ರದಲ್ಲಿ ಮೊದಲ ಹಂತದಲ್ಲಿ ಏ.19ರಂದು ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ನಕ್ಸಲರ ಕಾರ್ಯಾಚರಣೆ ಚುರುಕಾಗಿತ್ತು. ಏಕಕಾಲದಲ್ಲಿ ಹತ್ತು ನಕ್ಸಲರ ಹತ್ಯೆ ಮಾಡಿರುವುದು ಇತ್ತೀಚಿನ ಕಾರ್ಯಾಚರಣೆಯಲ್ಲಿ ಪ್ರಮುಖ ಬೆಳವಣಿಗೆ ಎನಿಸಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.