ADVERTISEMENT

ಕೃಷಿಯನ್ನು ಗೌರವಿಸದ ದೇಶ ಕುಸಿದು ಬೀಳುತ್ತದೆ: ಕಮಲ್ ಹಾಸನ್‌

ಎಂಎನ್‌ಎಂ ಪಕ್ಷದ ಸಂಸ್ಥಾಪಕ

ಪಿಟಿಐ
Published 28 ಡಿಸೆಂಬರ್ 2020, 12:00 IST
Last Updated 28 ಡಿಸೆಂಬರ್ 2020, 12:00 IST
ಕಮಲ್ ಹಾಸನ್ (ಸಾಂದರ್ಭಿಕ ಚಿತ್ರ)
ಕಮಲ್ ಹಾಸನ್ (ಸಾಂದರ್ಭಿಕ ಚಿತ್ರ)   

ತಿರುಚಿರಾಪಳ್ಳಿ(ತಮಿಳುನಾಡು): ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ದೆಹಲಿಯ ಹೊರ ವಲಯದಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಬೆಂಬಲ ವ್ಯಕ್ತಪಡಿಸಿರುವ ಖ್ಯಾತ ನಟ ಹಾಗೂ ಮಕ್ಕಳ್‌ ನೀದಿಮಯಂ(ಎಂಎನ್‌ಎಂ) ಪಕ್ಷದ ಸಂಸ್ಥಾಪಕ ಕಮಲ್ ಹಾಸನ್ ‘ಕೃಷಿಯನ್ನು ಗೌರವಿಸದ ರಾಷ್ಟ್ರ ಕುಸಿದು ಬೀಳುತ್ತದೆ‘ ಎಂದು ಹೇಳಿದರು.

ದೆಹಲಿಯ ಗಡಿಗಳಲ್ಲಿ ತಿಂಗಳಿನಿಂದ ರೈತರು ನಡೆಸುತ್ತಿರುವ ಪ್ರತಿಭಟನೆ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ‘ಕೃಷಿಕರನ್ನು ನಾವು ಅನ್ನದಾತರು ಎಂದು ಗೌರವಿಸುತ್ತೇವೆ. ಅಂಥ ಕೃಷಿಯನ್ನು ಗೌರವಿಸದ ದೇಶ ಕುಸಿದು ಬೀಳುತ್ತದೆ. ನಮ್ಮ ದೇಶ ಆ ಸ್ಥಿತಿಗೆ ತಲುಪಬಾರದು ಎಂದು ಬಯಸುತ್ತೇನೆ‘ ಎಂದು ಹೇಳಿದರು.

ನಿನ್ನೆಯಷ್ಟೇ ಹೈದರಾಬಾದ್‌ ಆಸ್ಪತ್ರೆಯಿಂದ ಬಿಡುಗಡೆಯಾದ ಸೂಪರ್‌ಸ್ಟಾರ್ ರಜನಿಕಾಂತ್ ಅವರ ಕುರಿತು ಕೇಳಿದ ಪ್ರಶ್ನೆಗೆ, ‘ಅವರು ಆರೋಗ್ಯವಾಗಿರಬೇಕು. ಎಲ್ಲದಕ್ಕಿಂತ ಅದು ಮುಖ್ಯ‘ ಎಂದು ಹಾರೈಸಿದರು.

ADVERTISEMENT

ರಜನಿಕಾಂತ್ ಅವರು ಪಕ್ಷ ಸ್ಥಾಪಿಸಿದ ನಂತರ, ಅವರೊಂದಿಗೆ ನೀವು ಕೈ ಜೋಡಿಸುತ್ತೀರಾ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕಮಲ್‌ ‘ನಾವು ನಲವತ್ತು ವರ್ಷಗಳಿಂದ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ‘ ಎಂದಷ್ಟೇ ಹೇಳಿದರು. ನಂತರ, ‘ಅವರು ರಾಜಕೀಯಕ್ಕೆ ಪ್ರವೇಶಿಸಿದ ಮಾತ್ರಕ್ಕೆ ನಮ್ಮ ಸ್ನೇಹ ದೂರವಾಗಬೇಕಾಗಿಲ್ಲ‘ ಎಂದೂ ಹೇಳಿದರು.

ಕೆಲವು ದಿನಗಳ ಹಿಂದೆಯಷ್ಟೇ ಕಮಲ್ ಹಾಗೂ ರಜನಿ ರಾಜಕೀಯ ಕ್ಷೇತ್ರದಲ್ಲಿ ಒಟ್ಟಾಗಿ ಕೆಲಸ ಮಾಡುವ ಸುಳಿವು ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.