ADVERTISEMENT

ಒಳ್ಳೆ ವ್ಯಕ್ತಿಯ ನಿರ್ಗಮನವಾಗುತ್ತಿದೆ: ನಾಯ್ಡುರನ್ನು ಕೊಂಡಾಡಿದ ಕಾಂಗ್ರೆಸ್‌ ನಾಯಕ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಜುಲೈ 2022, 2:08 IST
Last Updated 17 ಜುಲೈ 2022, 2:08 IST
ವೆಂಕಯ್ಯ ನಾಯ್ಡು
ವೆಂಕಯ್ಯ ನಾಯ್ಡು    

ನವದೆಹಲಿ: ಉಪರಾಷ್ಟ್ರಪತಿ ಚುನಾವಣೆಗೆ ಎನ್‌ಡಿಎ ಅಭ್ಯರ್ಥಿಯಾಗಿ ಜಗದೀಪ್ ಧನಕರ್ ಅವರನ್ನು ಬಿಜೆಪಿ ಘೋಷಿಸಿದ ಬೆನ್ನಿಗೇ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ವೆಂಕಯ್ಯ ನಾಯ್ಡು ಅವರನ್ನು ಕೊಂಡಾಡಿದ್ದಾರೆ. ನಾಯ್ಡು ನಿರ್ಗಮನಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.

‘ಮುಪ್ಪವರಪು ವೆಂಕಯ್ಯ ನಾಯ್ಡು ಅವರ ಅವಧಿಗೆ ತೆರೆಬಿದ್ದಿದೆ. ಅವರ ಹಾಸ್ಯ ಮತ್ತು ಬುದ್ಧಿವಂತಿಕೆಯನ್ನು ನಾವು ತಪ್ಪಿಸಿಕೊಳ್ಳಲಿದ್ದೇವೆ. ಅನೇಕ ಸಂದರ್ಭಗಳಲ್ಲಿ ಅವರು ವಿರೋಧ ಪಕ್ಷದವರೆಲ್ಲರನ್ನು ಕೆರಳಿಸುತ್ತಿದ್ದರು. ಆದರೂ, ಒಬ್ಬ ಒಳ್ಳೆಯ ವ್ಯಕ್ತಿಯ ನಿರ್ಗಮನವಾಗುತ್ತಿದೆ. ಅವರು ನಿವೃತ್ತರಾಗಿರಬಹುದು, ಆದರೆ ಅವರು ದಣಿಯುವುದಿಲ್ಲ ಎಂದು ನನಗೆ ತಿಳಿದಿದೆ’ ಎಂದು ಅವರು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಎಂ ವೆಂಕಯ್ಯ ನಾಯ್ಡು ಅವರು 2017ರ ಆಗಸ್ಟ್‌ 11ರಂದು ಉಪ ರಾಷ್ಟ್ರಪತಿಯಾಗಿ ಅಧಿಕಾರ ವಹಿಸಿಕೊಂಡಿದ್ದರು.

ADVERTISEMENT

ಉಪರಾಷ್ಟ್ರಪತಿ ಸ್ಥಾನಕ್ಕೆ ಆಗಸ್ಟ್‌ 6ರಂದು ಚುನಾವಣೆ ನಿಗದಿಯಾಗಿದೆ. ನಾಮಪತ್ರ ಸಲ್ಲಿಸಲು ಜುಲೈ 19 ಕೊನೆಯ ದಿನ. ನಾಮಪತ್ರಗಳ ಪರಿಶೀಲನೆ ಜುಲೈ 20ರಂದು ನಡೆಯಲಿದ್ದು, ನಾಮಪತ್ರಗಳ ವಾಪಸಾತಿಗೆ ಜುಲೈ 22 ಕೊನೆಯ ದಿನವಾಗಿದೆ. ಮತದಾನ ಆಗಸ್ಟ್‌ 6ರಂದು ನಡೆಯಲಿದ್ದು, ಅಂದೇ ಮತ ಎಣಿಕೆಯೂ ನಡೆಯಲಿದೆ ಎಂದು ಭಾರತೀಯ ಚುನಾವಣಾ ಆಯೋಗ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.