
ನವದೆಹಲಿ: ಸೈಬರ್ ದಾಳಿಗಳಿಗೆ ಒಳಗಾದಂತೆ ಖಾತ್ರಿಪಡಿಸುವುದು ಸೇರಿ ಆಧಾರ್ ತಂತ್ರಜ್ಞಾನವನ್ನು ಭವಿಷ್ಯಕ್ಕೆ ಅಣಿಗೊಳಿಸುವುದಕ್ಕಾಗಿ ಉನ್ನತ ಮಟ್ಟದ ತಜ್ಞರ ಸಮಿತಿಯೊಂದನ್ನು ರಚಿಸಲಾಗಿದೆ ಎಂದು ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ) ಶುಕ್ರವಾರ ಹೇಳಿದೆ.
ಪ್ರಾಧಿಕಾರದ ಮುಖ್ಯಸ್ಥ ನೀಲಕಂಠ ಮಿಶ್ರಾ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ ಎಂದು ಯುಐಡಿಎಐ ಪ್ರಕಟಣೆ ತಿಳಿಸಿದೆ.
‘ತಂತ್ರಜ್ಞಾನ ಕ್ಷೇತ್ರದಲ್ಲಿ ಹಾಗೂ ಆಧಾರ್ ನಿಯಂತ್ರಣಕ್ಕೆ ಸಂಬಂಧಿಸಿದ ನಿಯಮಗಳಲ್ಲಿ ತೀವ್ರಗತಿಯಲ್ಲಿ ಬದಲಾವಣೆಗಳು ಕಂಡುಬರುತ್ತಿವೆ. ಇದನ್ನು ಗಮನದಲ್ಲಿಟ್ಟುಕೊಂಡು ‘ಆಧಾರ್ ಮುನ್ನೋಟ 2032’ ಎಂಬ ಚೌಕಟ್ಟು ರೂಪಿಸಲಾಗಿದೆ’ ಪ್ರಾಧಿಕಾರ ತಿಳಿಸಿದೆ.
‘ಭವಿಷ್ಯದ ತಂತ್ರಜ್ಞಾನಕ್ಕೆ ಪೂರಕವಾಗಿ ಆಧಾರ್ ಇರುವಂತೆ ನೋಡಿಕೊಳ್ಳುವುದು ಮಾತ್ರವಲ್ಲ, ಆಧಾರ್ ಅನ್ನು ಹೆಚ್ಚು ಸುರಕ್ಷಿತ, ಎಲ್ಲರನ್ನೂ ಒಳಗೊಳ್ಳುವ ಹಾಗೂ ಜನಕೇಂದ್ರಿತ ಡಿಜಿಟಲ್ ಅಸ್ಮಿತೆಯನ್ನಾಗಿ ರೂಪಿಸುವುದು ಇದರ ಉದ್ದೇಶ’ ಎಂದೂ ಹೇಳಿದೆ.
ಯುಐಡಿಎಐ ಸಿಇಒ ಭುವನೇಶ ಕುಮಾರ್, ನ್ಯೂಟಾನಿಕ್ಸ್ ಸಂಸ್ಥಾಪಕ ಧೀರಜ್ ಪಾಂಡೆ, ಎಂಒಎಸ್ಐಪಿ ಕಂಪನಿ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಶಶಿಕುಮಾರ್ ಗಣೇಶನ್, ಟ್ರೈಲೀಗಲ್ನ ರಾಹುಲ್ ಮಥಾನ್, ಅಮೃತಾ ವಿ.ವಿ ಪ್ರಾಧ್ಯಾಪಕ ಪ್ರಭಾರಣ್ ಪೂರ್ಣಚಂದ್ರನ್, ಮಿಚಿಗನ್ ಸ್ಟೇಟ್ ವಿಶ್ವವಿದ್ಯಾಲಯದ ಅನಿಲ್ ಜೈನ್, ಪ್ರಾಧಿಕಾರದ ಉಪ ಪ್ರಧಾನ ನಿರ್ದೇಶಕ ಅಭಿಷೇಕ್ ಕುಮಾರ್ ಸಿಂಗ್, ಸರ್ವಂ ಎಐ ಸಹಸಂಸ್ಥಾಪಕ ವಿವೇಕ್ ರಾಘವನ್ ಹಾಗೂ ಐಐಟಿ–ಜೋಧಪುರ ಪ್ರಾಧ್ಯಾಪಕ ಮಯಂಕ್ ವತ್ಸ ಸಮಿತಿ ಸದಸ್ಯರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.