ನವದೆಹಲಿ: ಆಮ್ ಆದ್ಮಿ ಪಕ್ಷ ದೇಶದ ಅತ್ಯಂತ ಭ್ರಷ್ಟ ರಾಜಕೀಯ ಪಕ್ಷ ಎಂದು ಬಿಜೆಪಿ ಆರೋಪ ಮಾಡಿದೆ.
ಬಿಜೆಪಿ ನಾಯಕ ಮಂಜಿಂದರ್ ಸಿಂಗ್ ಸಿರ್ಸಾ ಮಾತನಾಡಿ, ‘ಭ್ರಷ್ಟಾಚಾರದ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ, ಮಹಿಳೆಯರಿಗೆ ಭದ್ರತೆ ಒದಗಿಸುತ್ತೇವೆ, ಭ್ರಷ್ಟರನ್ನು ಓಡಿಸುತ್ತೇವೆ ಎಂದು ಹೇಳಿ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದಿತ್ತು. ಆದರೆ ಇಂದು ಅದೇ ಪಕ್ಷ ದೇಶದ ಅತ್ಯಂತ ಭ್ರಷ್ಟ ಪಕ್ಷವಾಗಿದೆ’ ಎಂದು ಕಿಡಿಕಾರಿದರು.
‘ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷವು ಮಹಿಳೆಯರ ಸುರಕ್ಷತೆ ವಿಷಯ ಇಟ್ಟುಕೊಂಡು ರಾಜಕೀಯ ಮಾಡುತ್ತಿದೆ. ಆದರೆ ಮಹಿಳೆಯ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಶಿಕ್ಷೆಗೆ ಗುರಿಯಾಗಿ ಪ್ರಸ್ತುತ ಜಾಮೀನಿನ ಮೇಲೆ ಹೊರಗಿರುವ ಬಲ್ಬೀರ್ ಸಿಂಗ್ ಅವರನ್ನು ಪಂಜಾಬ್ನಲ್ಲಿ ಮಂತ್ರಿ ಮಾಡಿದೆ. ಇದು ಆಮ್ ಆದ್ಮಿಯ ದ್ವಂದ ನೀತಿ ತೋರಿಸುತ್ತದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಂಚನೆ ಪ್ರಕರಣದ ಆಡಿಯೊ ಸೋರಿಕೆಯಾದ ನಂತರವೂ ಫೌಜಾ ಸಿಂಗ್ ಅವರನ್ನು 4 ತಿಂಗಳ ಕಾಲ ಸಚಿವ ಸ್ಥಾನದಿಂದ ಕೆಳಗಿಳಿಸಿರಲಿಲ್ಲ. ಎಎಪಿ ನಾಯಕ ಅರವಿಂದ್ ಕೇಜ್ರಿವಾಲ್ ಹಣದ ಹಸಿವಿನಿಂದ ಭ್ರಷ್ಟರನ್ನು ಮಂತ್ರಿ ಮಾಡುತ್ತಾರೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ ಎಂದು ಸಿರ್ಸಾ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.