ಅರವಿಂದ ಕೇಜ್ರಿವಾಲ್
ಪಿಟಿಐ ಚಿತ್ರ
ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ರಾಜಕೀಯ ಕೈದಿ ಎಂಬಂತೆ ಪರಿಗಣಿಸಲಾಗುತ್ತಿದೆ. ಅವರನ್ನು ಬೆದರಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಆಮ್ ಆದ್ಮಿ ಪಕ್ಷ (ಎಎಪಿ) ಆರೋಪಿಸಿದೆ.
ಎಎಪಿ ರಾಜ್ಯಸಭೆ ಸದಸ್ಯ ಸಂದೀಪ್ ಪಾಠಕ್ ಅವರು, 'ಕೇಜ್ರಿವಾಲ್ ಅವರು ರಾಜಕೀಯ ಕೈದಿಯಾಗಿದ್ದಾರೆ. ಸರ್ವಾಧಿಕಾರಿಗಳು ರಾಜಕೀಯ ಕೈದಿಗಳನ್ನು ಹೇಗೆ ನಡೆಸಿಕೊಂಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಕೇಜ್ರಿವಾಲ್ ಅವರು ಧ್ವನಿ ಎತ್ತದಂತೆ ಮಾಡಲು ಬೆದರಿಸುವ ಪ್ರಯತ್ನಗಳು ನಡೆಯುತ್ತಿವೆ' ಎಂದು ಗಂಭೀರ ಆರೋಪ ಮಾಡಿದ್ದಾರೆ.
ಎಎಪಿಯ ರಾಷ್ಟ್ರೀಯ ಸಂಚಾಲಕರೂ ಆಗಿರುವ ಕೇಜ್ರಿವಾಲ್ ಅವರು ಪಿತೂರಿಗೆ ಬಲಿಯಾಗಿದ್ದಾರೆ ಎಂದಿರುವ ಪಾಠಕ್, ಕೇಜ್ರಿವಾಲ್ ಅವರಿಗೆ ಕಳೆದ 30 ವರ್ಷಗಳಿಂದ ತೀವ್ರ ಸ್ವರೂಪದ ಮಧುಮೇಹ (ಸಕ್ಕರೆ ಕಾಯಿಲೆ) ಇದೆ. ಅವರು ಹೈಪೊಗ್ಲೈಸಿಮಿಯಾದಿಂದ ಬಳಲುತ್ತಿದ್ದಾರೆ ಎಂದಿದ್ದಾರೆ.
'ಜೂನ್ 3ರಿಂದ ಜುಲೈ 7ರ ವರೆಗಿನ ನ್ಯಾಯಾಂಗ ಬಂಧನದ ಅವಧಿಯಲ್ಲಿ ಕೇಜ್ರಿವಾಲ್ ಅವರ ರಕ್ತದಲ್ಲಿನ ಸಕ್ಕರೆ ಪ್ರಮಾಣವು 34 ಬಾರಿ ಕುಸಿದಿದೆ. ಇದು ಗಂಭೀರವಾದ ವಿಚಾರ. ಅವರು ಸಾಮಾನ್ಯ ವ್ಯಕ್ತಿಯಲ್ಲ. ಜನರಿಂದ ಚುನಾಯಿತರಾಗಿರುವ ಮುಖ್ಯಮಂತ್ರಿ' ಎಂದು ಉಲ್ಲೇಖಿಸಿದ್ದಾರೆ.
ಇದೇ ವಿಚಾರವಾಗಿ ವಿರೋಧ ಪಕ್ಷಗಳ ಮೈತ್ರಿಕೂಟ 'ಇಂಡಿಯಾ' ದೆಹಲಿಯ ಜಂತರ್ಮಂತರ್ನಲ್ಲಿ ಜುಲೈ 30ರಂದು ಬೃಹತ್ ಪ್ರತಿಭಟನಾ ಸಮಾವೇಶ ನಡೆಸಲು ನಿರ್ಧರಿಸಿದೆ ಎಂದೂ ಪಾಠಕ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.