ಕೋಲ್ಕತ್ತ: ತೃಣಮೂಲ ಕಾಂಗ್ರೆಸ್ನ (ಟಿಎಂಸಿ) ಸಂಸದ ಅಭಿಷೇಕ್ ಬ್ಯಾನರ್ಜಿ ಅವರು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ. ಶುಕ್ರವಾರ ನಡೆದ ಟಿಎಂಸಿಯ ನೂತನ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಮೊದಲ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಮತ್ತು ಸೋದರಳಿಯ ಅಭಿಷೇಕ್ ನಡುವೆ ಬಿರುಕು ಮೂಡಿರುವ ಕುರಿತು ವರದಿಯಾಗಿರುವ ಬೆನ್ನಲ್ಲೇ ಈ ನಿರ್ಧಾರ ಹೊರ ಬಂದಿದೆ. ಈ ಮೂಲಕ ಪಕ್ಷದಲ್ಲಿ ಅಭಿಷೇಕ್ ನಿರ್ವಹಿಸುತ್ತಿದ್ದ ಹೊಣೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ಕಳೆದ ವಾರ ಮಮತಾ ಅವರು ಅಭಿಷೇಕ್ ಒಳಗೊಂಡಿದ್ದ ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯನ್ನು ವಿಸರ್ಜಿಸಿದ್ದರು ಹಾಗೂ ಹೊಸದಾಗಿ 20 ಸದಸ್ಯರನ್ನು ಒಳಗೊಂಡ ಸಮಿತಿಯನ್ನು ರಚಿಸಿದ್ದರು. ಅದರಲ್ಲಿ ಪಕ್ಷದ ಹಿರಿಯ ಮುಖಂಡರ ಜೊತೆಗೆ ಅಭಿಷೇಕ್ ಅವರಿಗೂ ಸ್ಥಾನ ನೀಡಲಾಗಿತ್ತು.
ಟಿಎಂಸಿಯ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮೂರು ಕಾರ್ಪೊರೇಷನ್ಗಳಿಗೆ ಮೇಯರ್ಗಳನ್ನು ಆಯ್ಕೆ ಮಾಡುವ ಕುರಿತು ನಿರ್ಧರಿಸಲಾಗಿದೆ. ಸುಖೆಂದು ಶೇಖರ್ ರಾಯ್ ಅವರು ಪಕ್ಷದ ರಾಷ್ಟ್ರೀಯ ವಕ್ತಾರ ಮತ್ತು ರಾಜ್ಯಸಭಾ ವಕ್ತಾರರಾಗಿರುತ್ತಾರೆ. ಕಕೋಲಿ ಘೋಷ್ ದಸ್ತಿದಾರ್ ಅವರು ಲೋಕಸಭೆಯ ವಕ್ತಾರರಾಗಿ ಜವಾಬ್ದಾರಿ ನಿರ್ವಹಿಸಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.