ADVERTISEMENT

ಉತ್ತರ ಪ್ರದೇಶ: ಲವ್‌ ಜಿಹಾದ್ ತಡೆ ಕಾನೂನಿಗೆ ತಿಂಗಳು, ಈವರೆಗೆ 35 ಜನರ ಬಂಧನ

ಪಿಟಿಐ
Published 26 ಡಿಸೆಂಬರ್ 2020, 11:31 IST
Last Updated 26 ಡಿಸೆಂಬರ್ 2020, 11:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಲಖನೌ: ಉತ್ತರ ಪ್ರದೇಶದಲ್ಲಿ ವಿವಾದಾತ್ಮಕ ಮತಾಂತರ ತಡೆ ಸುಗ್ರೀವಾಜ್ಞೆ ಜಾರಿಯಾಗಿ ತಿಂಗಳು ಕಳೆದಿದ್ದು,ಇಲ್ಲಿಯವರೆಗೂ ಈ ಕಾನೂನಿನ ನಿಯಮ ಉಲ್ಲಂಘಿಸಿದ 35 ಜನರನ್ನು ಪೊಲೀಸರು ಬಂಧಿಸಿದ್ದಾರೆ.

ನ.27ರಂದು ಅಧಿಸೂಚನೆ ಮುಖಾಂತರ ಕಾನೂನುಬಾಹಿರ ಮತಾಂತರ ತಡೆ ಸುಗ್ರೀವಾಜ್ಞೆ 2020 ಅನ್ನು ಜಾರಿಗೊಳಿಸಲಾಗಿತ್ತು. ಇದನ್ನು ಉಲ್ಲಂಘಿಸಿದವರ ವಿರುದ್ಧ ಇಲ್ಲಿಯವರೆಗೂ ಸುಮಾರ 12 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ಇಟಾದಲ್ಲಿ ಎಂಟು ಜನರನ್ನು, ಸೀತಾಪುರದಲ್ಲಿ ಏಳು, ಗ್ರೇಟರ್‌ ನೊಯ್ಡಾದಲ್ಲಿ ನಾಲ್ವರು, ಶಹಜಹಾನ್‌ಪುರ, ಅಜಂಗಡದಲ್ಲಿ ತಲಾ ಮೂವರು, ಮೊರದಾಬಾದ್‌, ಮುಜಾಫ್ಫರನಗರ, ಬಿಜ್‌ನೊರ್‌, ಕನೌಜ್‌ನಲ್ಲಿ ತಲಾ ಇಬ್ಬರು ಹಾಗೂ ಬರೇಲಿ, ಹರ್ದೊಯಿಯಲ್ಲಿ ತಲಾ ಒಬ್ಬರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಧಿಸೂಚನೆ ಪ್ರಕಟವಾದ ಮರುದಿನವೇ ಬರೇಲಿಯಲ್ಲಿ ಮೊದಲ ಪ್ರಕರಣವನ್ನು ಪೊಲೀಸರು ದಾಖಲಿಸಿದ್ದರು.

ಮದುವೆಯಾಗುವ ಏಕೈಕ ಉದ್ದೇಶ ಅಥವಾ ಒತ್ತಾಯ ಪೂರ್ವಕವಾಗಿ, ವಂಚಿಸಿ ಧಾರ್ಮಿಕ ಮತಾಂತರ ಮಾಡುವುದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಸರ್ಕಾರವು ಈ ಸುಗ್ರೀವಾಜ್ಞೆ ಹೊರಡಿಸಿತ್ತು. ಇದರಲ್ಲಿರುವ ನಿಯಮಗಳನ್ನು ಉಲ್ಲಂಘಿಸುವವರಿಗೆ 10 ವರ್ಷದವರೆಗೆ ಜೈಲು ಶಿಕ್ಷೆ ಹಾಗೂ ₹50 ಸಾವಿರ ದಂಡ ವಿಧಿಸುವ ಅವಕಾಶವಿದೆ. ಮದುವೆಯಾಗುವ ಉದ್ದೇಶದಿಂದಷ್ಟೇ ಮತಾಂತರ ಮಾಡಿದರೆ, ಅಂಥ ಮದುವೆ ಊರ್ಜಿತವಲ್ಲ ಎಂದು ಘೋಷಿಸುವ ಅಧಿಕಾರವೂ ಕಾನೂನಿನಡಿ ಇದೆ.

ADVERTISEMENT

ಸುಗ್ರೀವಾಜ್ಞೆಗೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು.ಈ ಕಾನೂನು ಮೂಲಭೂತ ಹಕ್ಕು ಮೊಟಕುಗೊಳಿಸುತ್ತದೆ ಎಂದು ಉಲ್ಲೇಖಿಸಿ ಈಗಾಗಲೇ ಅಲಹಾಬಾದ್‌ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಾಗಿದೆ. ಜ.4ರೊಳಗೆ ಅಫಿಡವಿಟ್‌ ಸಲ್ಲಿಸಲು ಸರ್ಕಾರಕ್ಕೆ ಹೈಕೋರ್ಟ್‌ ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.