ADVERTISEMENT

ಅನ್ವಯ್‌ ನಾಯ್ಕ್‌ ಆತ್ಮಹತ್ಯೆ ಬೆದರಿಕೆ ಕಡೆಗಣನೆ: ಆರೋಪಪಟ್ಟಿಯಲ್ಲಿ ಉಲ್ಲೇಖ

ಪಿಟಿಐ
Published 5 ಡಿಸೆಂಬರ್ 2020, 15:46 IST
Last Updated 5 ಡಿಸೆಂಬರ್ 2020, 15:46 IST
ಅರ್ನಬ್‌ ಗೋಸ್ವಾಮಿ
ಅರ್ನಬ್‌ ಗೋಸ್ವಾಮಿ   

ಮುಂಬೈ: ‘ಬಾಕಿ ಹಣವನ್ನು ನೀಡದೇ ಇದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ’ ಎನ್ನುವ ಅನ್ವಯ್‌ ನಾಯ್ಕ್‌ ಅವರ ಬೆದರಿಕೆಯನ್ನು, ರಿಪಬ್ಲಿಕ್‌ ಟಿವಿ ಸಂಪಾದಕ ಅರ್ನಬ್‌ ಗೋಸ್ವಾಮಿ ಹಾಗೂ ಇತರೆ ಆರೋಪಿಗಳು ಕಡೆಗಣಿಸಿದ್ದರು ಎಂದು 2018ರಲ್ಲಿ ನಡೆದ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ಮತ್ತೊಂದೆಡೆ, ಆರೋಪಪಟ್ಟಿಯನ್ನು ಆಧರಿಸಿ ವಿಚಾರಣೆಯನ್ನು ನಡೆಸದಂತೆ ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶನ ನೀಡುವಂತೆ ಕೋರಿ ಬಾಂಬೈ ಹೈಕೋರ್ಟ್‌ಗೆ ಅರ್ನಬ್‌ ಅವರು ಮತ್ತೆ ಅರ್ಜಿ ಸಲ್ಲಿಸಿದ್ದಾರೆ. ಶುಕ್ರವಾರ ರಾಯಗಡ್‌ ಜಿಲ್ಲೆಯಲ್ಲಿರುವ ಅಲಿಬಾಗ್‌ ಸೆಷನ್ಸ್‌ ನ್ಯಾಯಾಲಯಕ್ಕೆ ಪೊಲೀಸರು ಆರೋಪಪಟ್ಟಿ ಸಲ್ಲಿಸಿದ್ದರು.

‘ಬಾಕಿ ಉಳಿದಿರುವ ಹಣ ನೀಡದೇ ಇದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಅನ್ವಯ್‌ ಆರೋಪಿಗಳಿಗೆ ತಿಳಿಸಿದ್ದರು. ಈ ಬೆದರಿಕೆಯನ್ನು ಕಡೆಗಣಿಸಿದ್ದ ಆರೋಪಿಗಳು, ‘ಏನು ಬೇಕಾದರೂ ಮಾಡಿಕೊ’ ಎಂದಿದ್ದರು. ಬಾಕಿ ಉಳಿದಿರುವ ಹಣವ ಸಿಗದೇ ಇದ್ದ ಕಾರಣ ಅನ್ವಯ್‌ ಮಾನಸಿಕ ಒತ್ತಡದಲ್ಲಿದ್ದರು. ತನ್ನ ಉದ್ಯಮದಲ್ಲಿ ತಾಯಿಯೂ ಪಾಲುದಾರಳಾಗಿದ್ದ ಕಾರಣ, ತಾನು ಆತ್ಮಹತ್ಯೆ ಮಾಡಿಕೊಂಡರೆ ತಾಯಿಗೆ ಸಮಸ್ಯೆಯಾಗಬಹುದು ಎಂದು ಅನ್ವಯ್‌ ಅಂದುಕೊಂಡಿದ್ದರು. ಹೀಗಾಗಿ ತಾಯಿಯನ್ನು ಕೊಂದು, ನಂತರ ಆತ್ಮಹತ್ಯೆ ಪತ್ರ ಬರೆದು ನೇಣು ಹಾಕಿಕೊಂಡಿದ್ದರು. ಪತ್ರದಲ್ಲಿರುವ ನಾಯ್ಕ್‌ ಅವರದೇ ಕೈಬರಹ ಎಂದು ಗುರುತಿಸಲಾಗಿದೆ’ ಎಂದೂ 1,914 ಪುಟಗಳ ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ADVERTISEMENT

ಆರೋಪಿಗಳಾದ ಅರ್ನಬ್‌, ಫಿರೋಜ್‌ ಶೇಖ್‌ ಹಾಗೂ ನಿತೀಶ್‌ ಸರ್ದಾ ಅವರ ಕಂಪನಿಯು ನಾಯ್ಕ್‌ ಅವರ ಕಾನ್‌ಕೊರ್ಡ್‌ ಡಿಸೈನ್‌ ಪ್ರೈ.ಲಿಗೆ ಕ್ರಮವಾಗಿ ₹83 ಲಕ್ಷ, ₹4 ಕೋಟಿ ಹಾಗೂ ₹55 ಲಕ್ಷ ನೀಡಬೇಕಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.