ಹೇಮಂತ್ ಸೊರೇನ್
ರಾಂಚಿ: ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರಿಗೆ ಜಾರಿ ನಿರ್ದೇಶನಾಲಯವು (ಇ.ಡಿ) ಹೊಸದಾಗಿ ಸಮನ್ಸ್ ನೀಡಿದ ಬೆನ್ನಲ್ಲೇ, ಅವರು ದೆಹಲಿಗೆ ಶನಿವಾರ ರಾತ್ರಿ ತೆರಳಿದ್ದಾರೆ. ಅವರ ದೆಹಲಿ ಭೇಟಿಯು ಪೂರ್ವನಿರ್ಧರಿತವಲ್ಲದ ಕಾರಣ ಈ ನಡೆಯು ಸಂಶಯಗಳಿಗೆ ಎಡೆಮಾಡಿದೆ.
ಜನವರಿ 29 ಅಥವಾ 31ರಂದು ವಿಚಾರಣೆಗೆ ಹಾಜರಾಗಲು ಹೇಮಂತ್ ಅವರ ಲಭ್ಯತೆ ಕುರಿತು ಇ.ಡಿ ಪ್ರಶ್ನಿಸಿತ್ತು.
ಕಾನೂನು ಸಲಹೆಗಳನ್ನು ಪಡೆಯಲು ಅವರು ದೆಹಲಿಗೆ ತೆರಳಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ, ಈ ಕುರಿತು ಮುಖ್ಯಮಂತ್ರಿ ಕಚೇರಿ ಯಾವುದೇ ಮಾಹಿತಿ ನೀಡಿಲ್ಲ.
‘ಇ.ಡಿಯಿಂದ ಸಮನ್ಸ್ ಬಂದ ಬಳಿಕ ಹೇಮಂತ್ ಹಠಾತ್ ಆಗಿ ಅವರು ದೆಹಲಿಗೆ ದೌಡಾಯಿಸಿದರು. ಜ. 29ರಿಂದ 31ರ ವರೆಗೆ ಜಾರ್ಖಂಡ್ನ ವಿವಿಧ ಸ್ಥಳಗಳಲ್ಲಿ ನಡೆಯುವ ಹಲವು ಕಾರ್ಯಕ್ರಮಗಳಲ್ಲಿ ಅವರು ಭಾಗಿಯಾಗಬೇಕಿತ್ತು ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭೂ ಹಗರಣಕ್ಕೆ ಸಂಬಂಧಿಸಿ ತನಿಖೆ ನಡೆಸುತ್ತಿರುವ ಇ.ಡಿ ಅಧಿಕಾರಿಗಳು ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ ಅಡಿ (ಪಿಎಂಎಲ್ಎ) ಹೇಮಂತ್ ಸೊರೇನ್ ಅವರ ಹೇಳಿಕೆಯನ್ನು ಜನವರಿ 20ರಂದು ದಾಖಲಿಸಿಕೊಂಡಿದ್ದರು. ವಿಚಾರಣೆ ಸಂಪೂರ್ಣವಾಗದ ಕಾರಣ ಮತ್ತೆ ಸಮನ್ಸ್ ನೀಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.