ADVERTISEMENT

ಗೊಗೊಯಿ ವಿರುದ್ಧ ನ್ಯಾಯಾಂಗ ನಿಂದನೆ ಆರೋಪ: ಪ್ರಕರಣ ದಾಖಲಿಸಲು ಅನುಮತಿ ನೀಡದ ಎ.ಜಿ

ನಿವೃತ್ತ ಸಿಜೆಐ ಗೊಗೊಯಿ ವಿರುದ್ಧ ನ್ಯಾಯಾಂಗ ನಿಂದನೆ ಆರೋಪ

ಪಿಟಿಐ
Published 27 ಫೆಬ್ರುವರಿ 2021, 8:37 IST
Last Updated 27 ಫೆಬ್ರುವರಿ 2021, 8:37 IST
ನಿವೃತ್ತ ಸಿಜೆಐ ರಂಜನ್‌ ಗೊಗೊಯಿ
ನಿವೃತ್ತ ಸಿಜೆಐ ರಂಜನ್‌ ಗೊಗೊಯಿ   

ನವದೆಹಲಿ: ಸುಪ್ರೀಂಕೋರ್ಟ್‌ನ ನಿವೃತ್ತ ಮುಖ್ಯನ್ಯಾಯಮೂರ್ತಿ ಹಾಗೂ ರಾಜ್ಯಸಭಾ ಸದಸ್ಯ ರಂಜನ್‌ ಗೊಗೊಯಿ ಅವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುವ ಸಂಬಂಧ ಅನುಮತಿ ನೀಡಲು ಅಟಾರ್ನಿ ಜನರಲ್‌ ಕೆ.ಕೆ.ವೇಣುಗೋಪಾಲ ನಿರಾಕರಿಸಿದ್ದಾರೆ.

ನ್ಯಾಯಾಂಗ ವ್ಯವಸ್ಥೆ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ಆರೋಪವನ್ನು ನಿವೃತ್ತ ಸಿಜೆಐ ರಂಜನ್ ಗೊಗೊಯಿ ಎದುರಿಸುತ್ತಿದ್ದಾರೆ.

‘ದೇಶದ ನ್ಯಾಯಾಂಗ ವ್ಯವಸ್ಥಯೇ ಕುಸಿದಿದೆ. ನ್ಯಾಯ ಬೇಡಿ ವ್ಯಕ್ತಿಯೊಬ್ಬ ಕೋರ್ಟ್‌ ಮೆಟ್ಟಿಲೇರಿದಾಗ ಸಕಾಲದಲ್ಲಿ ತೀರ್ಪು ಹೊರಬೀಳುವ ಸಾಧ್ಯತೆ ಈಗ ಕಡಿಮೆ ಎಂಬುದಾಗಿ ನಿವೃತ್ತ ಸಿಜೆಐ ಗೊಗೊಯಿ ಇತ್ತೀಚೆಗೆ ಹೇಳಿದ್ದರು. ಹೀಗಾಗಿ ಅವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿ, ವಿಚಾರಣೆ ನಡೆಸಬೇಕು’ ಎಂದು ಕೋರಿ ಸಾಮಾಜಿಕ ಹೋರಾಟಗಾರ ಸಾಕೇತ್‌ ಗೋಖಲೆ ಎಂಬುವವರು ಅರ್ಜಿ ಸಲ್ಲಿಸಿದ್ದರು.

ADVERTISEMENT

‘ಗೊಗೊಯಿ ಅವರ ಸಂದರ್ಶನವನ್ನು ನಾನು ವೀಕ್ಷಿಸಿದ್ದೇನೆ. ನ್ಯಾಯಾಂಗ ವ್ಯವಸ್ಥೆ ಕುರಿತು ಅವರು ವ್ಯಕ್ತಪಡಿಸಿರುವ ಅಭಿಪ್ರಾಯಗಳು ನ್ಯಾಯಾಲಯದ ಘನತೆಯನ್ನು ಕುಂದಿಸುವ ರೀತಿಯಲ್ಲಿ ಇರಲಿಲ್ಲ. ನ್ಯಾಯಾಂಗ ನಿಂದನೆಯಾಗುವಂಥ ಅಭಿಪ್ರಾಯವನ್ನು ಸಹ ವ್ಯಕ್ತಪಡಿಸಿಲ್ಲ. ಗೊಗೊಯಿ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಅನುಮತಿ ನಿರಾಕರಿಸಲಾಗಿದೆ’ ಎಂದು ವೇಣುಗೋಪಾಲ ಅವರು ಗೋಖಲೆ ಅವರಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.