ADVERTISEMENT

AI Summit | ಮೋದಿ ವಿರುದ್ಧ ಪ್ರತಿಭಟನೆ: ಯುವ ಕಾಂಗ್ರೆಸ್ ಕಾರ್ಯಕರ್ತರ ಬಂಧನ

ಶಮಿನ್‌ ಜಾಯ್‌
Published 20 ಫೆಬ್ರುವರಿ 2026, 13:28 IST
Last Updated 20 ಫೆಬ್ರುವರಿ 2026, 13:28 IST
<div class="paragraphs"><p>ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು</p></div>

ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು

   

ನವದೆಹಲಿ: ‘ಇಂಡಿಯಾ ‘ಎ.ಐ ಇಂಪ್ಯಾಕ್ಟ್‌ ಶೃಂಗಸಭೆ’ ನಡೆಯುತ್ತಿರುವ ಹಾಲ್‌ನಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರ ಗುಂಪೊಂದು ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅರಬೆತ್ತಲೆ ಪ್ರತಿಭಟನೆ ನಡೆಸಿತು.

‘ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ಕುರಿತು ಮೋದಿ ಅವರು ರಾಜಿ ಮಾಡಿಕೊಂಡಿದ್ದಾರೆ. ಇದು ದೇಶದ ಹಿತಾಸಕ್ತಿಗೆ ಮಾರಕ’ ಎಂದು ಕಾಂಗ್ರೆಸ್ ಕಾರ್ಯಕರ್ತರು ಘೋಷಣೆ ಕೂಗಿದ್ದಾರೆ.

ADVERTISEMENT

ಬಿಹಾರದ ರಾಷ್ಟ್ರೀಯ ಕಾರ್ಯದರ್ಶಿಗಳಾದ ಕೃಷ್ಣ ಹರಿ, ಕುಂದನ್ ಯಾದವ್, ತೆಲಂಗಾಣದ ರಾಷ್ಟ್ರೀಯ ಸಂಯೋಜಕ ನರಸಿಂಹ ಯಾದವ್ ಮತ್ತು ಉತ್ತರ ಪ್ರದೇಶದ ಅಜಯ್ ಕುಮಾರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

10ಕ್ಕೂ ಹೆಚ್ಚು ಯುವ ಕಾಂಗ್ರೆಸ್ ಕಾರ್ಯಕರ್ತರು ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಳ್ಳುವ ಮೂಲಕ ಭಾರತ ಮಂಟಪಕ್ಕೆ ಪ್ರವೇಶಿಸಿ ಅರಬೆತ್ತಲೆ ಪ್ರತಿಭಟನೆ ನಡೆಸಿದ್ದಾರೆ. ಇದನ್ನು ಬಿಜೆಪಿ ಉಪಾಧ್ಯಕ್ಷ ಬೈಜಯಂತ್ ಪಾಂಡಾ ‘ರಾಷ್ಟ್ರವಿರೋಧಿ ಕೃತ್ಯ’ ಎಂದು ಬಣ್ಣಿಸಿದರೆ, ಯುವ ಕಾಂಗ್ರೆಸ್ ಅಧ್ಯಕ್ಷ ಉದಯ್ ಭಾನು ಮಾತನಾಡಿ, ಪ್ರಧಾನಿ ಮೋದಿ ಅವರು ದೇಶದ ಹಿತಾಸಕ್ತಿ ವಿಚಾರದಲ್ಲಿ ರಾಜಿ ಮಾಡಿಕೊಂಡಾಗ ರಾಹುಲ್ ಗಾಂಧಿ ಅವರ ಸೈನಿಕರು ಸುಮ್ಮನೆ ಕೂರುವುದಿಲ್ಲ’ ಎಂದು ಪ್ರತಿಭಟನೆಯನ್ನು ಸಮರ್ಥಿಸಿಕೊಂಡಿದ್ದಾರೆ.

‘ಪ್ರತಿಭಟನಾಕಾರರು ಆನ್‌ಲೈನ್‌ನಲ್ಲಿ ಹೆಸರು ನೋಂದಣಿ ಮಾಡಿಸಿ, ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದ ನಂತರ ಹಾಲ್‌ಗೆ ಪ್ರವೇಶಿಸಿದ್ದಾರೆ’ ಎಂದು ಹೆಚ್ಚುವರಿ ಪೊಲೀಸ್ ಕಮಿಷನರ್ ದೇವೇಶ್ ಕುಮಾರ್ ಮಹ್ಲಾ ತಿಳಿಸಿದರು. ‘ಟಿ–ಶರ್ಟ್‌ ಕಾಣದಂತೆ ಅದರ ಮೇಲೆ ಸ್ವೆಟರ್‌ ಧರಿಸಿದ್ದರು. ಹಾಲ್‌ ಪ್ರವೇಶಿಸಿದ ಬಳಿಕ ಸ್ವೆಟರ್‌ ತೆಗೆದು ಟಿ–ಶರ್ಟ್‌ ಪ್ರದರ್ಶಿಸಿದರು’ ಎಂದಿದ್ದಾರೆ.

ಪ್ರಧಾನಿ ಮೋದಿ ವಿರುದ್ಧ ಘೋಷಣೆ ಕೂಗುತ್ತಾ ಹಾಲ್‌ನಲ್ಲಿ ಒಂದಷ್ಟು ದೂರ ಮೆರವಣಿಗೆ ನಡೆಸಿದರು. ಈ ವೇಳೆ ಅಲ್ಲಿದ್ದ ಕೆಲವರು ಪ್ರತಿಭಟನಕಾರರ ಕೈಯಿಂದ ಟಿ–ಶರ್ಟ್‌ ಕಿತ್ತುಕೊಳ್ಳಲು ಪ್ರಯತ್ನಿಸಿದರು. ಪರಸ್ಪರ ಮಾತಿನ ಚಕಮಕಿ ನಡೆದು ಸ್ಥಳದಲ್ಲಿ ಗೊಂದಲ ಉಂಟಾಯಿತು. ಅಲ್ಲಿದ್ದ ಸ್ವಯಂಸೇವಕರು ಮತ್ತು ಭದ್ರತಾ ಸಿಬ್ಬಂದಿ ತಕ್ಷಣವೇ ಎಲ್ಲ ಪ್ರತಿಭಟನಕಾರರನ್ನು ಹೊರಗೆ ಕಳುಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.