ಕೊಯಂಬತ್ತೂರು: ಪೊಲ್ಲಾಚಿ ಸಮೀಪ 2019ರಲ್ಲಿ ಯುವತಿಯೊಬ್ಬರ ಮೇಲೆ ನಡೆದ ಸಾಮೂಹಿಕ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಆಡಳಿತಾರೂಢ ಎಐಡಿಎಂಕೆ ಪಕ್ಷದ ಕಾರ್ಯಕರ್ತ ಸೇರಿದಂತೆ ಮೂವರನ್ನು ಸಿಬಿಐ ಬಂಧಿಸಿದೆ.
ಬಂಧಿತರನ್ನು ಮಹಿಳಾ ನ್ಯಾಯಾಲಯದಲ್ಲಿ ಹಾಜರುಪಡಿಸಿ, ನಂತರ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಿಬಿ–ಸಿಐಡಿಯಿಂದ ಪ್ರಕರಣವನ್ನು ವಹಿಸಿಕೊಂಡಿರುವ ಸಿಬಿಐ, ಈಗಾಗಲೇ ಐವರನ್ನು ಬಂಧಿಸಿದ್ದು, ಅವರುಗಳ ವಿರುದ್ಧ ಮೇ 2019ರಲ್ಲಿ ಆರೋಪ ಪಟ್ಟಿಯನ್ನು ಸಲ್ಲಿಸಿದೆ. ನಂತರ ಮುಂದುವರಿದ ತನಿಖೆಯಲ್ಲಿ ಎಐಎಡಿಎಂಕೆ ಪಕ್ಷದ ವಿದ್ಯಾರ್ಥಿ ವಿಭಾಗದ ನಾಯಕ ಅರುಣಾನಂದಂ ಮತ್ತು ಆತನ ಇಬ್ಬರು ಸ್ನೇಹಿತರನ್ನು ಬುಧವಾರ ಬಂಧಿಸಲಾಗಿದೆ.
‘ನಾಲ್ವರು ಪುರುಷರ ತಂಡವೊಂದು ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಆ ದೃಶ್ಯವನ್ನು ರೆಕಾರ್ಡ್ ಮಾಡಿದರು. ನಂತರ ಆ ದೃಶ್ಯದ ವಿಡಿಯೊಗಳನ್ನಿಟ್ಟು ಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದಾರೆ‘ ಎಂದುಫೆಬ್ರುವರಿ 2019ರಲ್ಲಿ ಯುವತಿಯೊಬ್ಬರು ಪೊಲೀಸರಿಗೆ ದೂರು ನೀಡಿದ್ದರು.
ಇದೇ ವೇಳೆ ಪೊಲ್ಲಾಚಿಯಲ್ಲಿ ಅನೇಕ ಮಹಿಳೆಯರ ಮೇಲೆ ಇಂಥದ್ದೇ ಗುಂಪೊಂದು ಹೀಗೆ ಲೈಂಗಿಕ ದೌರ್ಜನ್ಯ ಎಸಗಿ, ಬ್ಲಾಕ್ ಮೇಲ್ ಮಾಡುತ್ತಿದೆ ಎಂಬ ಸುದ್ದಿ ತಿಳಿಯಿತು. ಸಾರ್ವಜನಿಕ ವಲಯದಲ್ಲಿ ಈ ಸುದ್ದಿ ಹರಡುತ್ತಿದ್ದಂತೆ, ತಮಿಳುನಾಡು ಸರ್ಕಾರ ಎಚ್ಚೆತ್ತುಕೊಂಡು, ಈ ಪ್ರಕರಣದ ತನಿಖೆ ನಡೆಸುವಂತೆ ಸಿಬಿ–ಸಿಐಡಿ ಪೊಲೀಸ್ಗೆ ಆದೇಶಿಸಿತು. ಆ ನಂತರ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.