ಅಹಮದಾಬಾದ್: ವಿಮಾನ ಅಪಘಾತ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ಮಿಲಿಟರಿ ಅಧಿಕಾರಿಗಳು, 'ಬದುಕುಳಿದ ಒಬ್ಬರೂ ಕಂಡಿಲ್ಲ' ಎಂದು ಆಘಾತ ವ್ಯಕ್ತಪಡಿಸಿದ್ದಾರೆ.
ಗುಜರಾತ್ನ ಅಹಮದಾಬಾದ್ನಿಂದ ಲಂಡನ್ನತ್ತ ಪ್ರಯಾಣ ಆರಂಭಿಸಿದ್ದ ಏರ್ ಇಂಡಿಯಾ ವಿಮಾನ AI-171 ಇಂದು (ಗುರುವಾರ) ಮಧ್ಯಾಹ್ನ 1.40 ಸುಮಾರಿಗೆ ಪತನಗೊಂಡಿದೆ.
ವಿಮಾನದಲ್ಲಿ 10 ಸಿಬ್ಬಂದಿ ಸೇರಿದಂತೆ ಒಟ್ಟು 242 ಮಂದಿ ಇದ್ದರು. ಯಾರೊಬ್ಬರೂ ಬದುಕುಳಿದಿಲ್ಲ ಎಂದು ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. ಆದರೆ, ಆ ಸುದ್ದಿಯನ್ನು ವಿಮಾನಯಾನ ಸಂಸ್ಥೆಯಾಗಲಿ, ನಾಗರಿಕ ವಿಮಾನಯಾನ ಸಚಿವಾಲಯವಾಗಲಿ ಅಥವಾ ಸ್ಥಳೀಯ ಆಡಳಿತ ಖಚಿತಪಡಿಸಿಲ್ಲ.
ಆದರೆ, ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿರುವ ಸೇನಾ ಸಿಬ್ಬಂದಿಯೇ, 'ದುರಂತಕ್ಕೀಡಾಗಿ ಬದುಕುಳಿದಿರುವ ಒಬ್ಬರನ್ನೂ ಕಾರ್ಯಾಚರಣೆ ವೇಳೆ ನೋಡಿಲ್ಲ' ಎಂದು ಹೇಳಿದ್ದಾರೆ. ಇದು, ದುರಂತದ ಬಗ್ಗೆ ತೀವ್ರ ಆಘಾತ ಉಂಟುಮಾಡಿದೆ.
ಸೇನೆಯು 130 ಯೋಧರನ್ನು ರಕ್ಷಣಾ ಕಾರ್ಯಾಚರಣೆಗೆ ನಿಯೋಜಿಸಿದೆ.
ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಕರ್ನಾಟಕದ ಸಿದ್ದರಾಮಯ್ಯ ಸೇರಿದಂತೆ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಸೇರಿದಂತೆ ಅಂತರರಾಷ್ಟ್ರೀಯ ನಾಯಕರು ಸಂತಾಪ ಸೂಚಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.