ADVERTISEMENT

ಪಂಜಾಬ್: ಭಗತ್‌ ಸಿಂಗ್ ಪೂರ್ವಜರ ಊರಲ್ಲಿ ಇಂದು ಮಾನ್ ಪ್ರಮಾಣ

ಪಿಟಿಐ
Published 15 ಮಾರ್ಚ್ 2022, 21:42 IST
Last Updated 15 ಮಾರ್ಚ್ 2022, 21:42 IST
ಜಲಂಧರ್ ಸಮೀಪದ ಖಟಕಡ್ ಕಲಂ ಗ್ರಾಮದಲ್ಲಿ ಮುಖ್ಯಮಂತ್ರಿ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಸಿದ್ಧತೆ ನಡೆಯಿತು–ಪಿಟಿಐ ಚಿತ್ರ
ಜಲಂಧರ್ ಸಮೀಪದ ಖಟಕಡ್ ಕಲಂ ಗ್ರಾಮದಲ್ಲಿ ಮುಖ್ಯಮಂತ್ರಿ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಸಿದ್ಧತೆ ನಡೆಯಿತು–ಪಿಟಿಐ ಚಿತ್ರ   

ಎಸ್‌ಬಿಎಸ್‌ ನಗರ (ಪಂಜಾಬ್): ಪಂಜಾಬ್‌ನ ನೂತನ ಮುಖ್ಯಮಂತ್ರಿಯಾಗಿ ಭಗವಂತ ಮಾನ್ ಅವರು ಬುಧವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರ ಭಗತ್‌ ಸಿಂಗ್ ಅವರ ಪೂರ್ವಜರ ಊರಾದ ಶಹೀದ್‌ ಭಗತ್‌ಸಿಂಗ್ ನಗರ ಜಿಲ್ಲೆಯ (ಎಸ್‌ಬಿಎಸ್‌) ಖಟಕಡ್ ಕಲಂನಲ್ಲಿ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಸಿದ್ಧತೆಗಳು ಪೂರ್ಣಗೊಂಡಿವೆ.

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅನಿರುದ್ಧ್ ತಿವಾರಿ, ಡಿಜಿಪಿ ವಿ.ಕೆ. ಭವರಾ, ಮುಖ್ಯಮಂತ್ರಿಯವರ ಹೆಚ್ಚುವರಿ ಕಾರ್ಯದರ್ಶಿ ಎ. ವೇಣು ಪ್ರಸಾದ್ ಅವರು ಸಿದ್ಧತೆಯ ಪರಿಶೀಲನೆ ನಡೆಸಿದರು.

ಸಮಾರಂಭದಲ್ಲಿ ಭಾಗಿಯಾಗುವಂತೆ ರಾಜ್ಯದ ಜನರನ್ನು ಮಾನ್ ಆಹ್ವಾನಿಸಿದ್ದಾರೆ. ‘ನಾನೊಬ್ಬನೇ ಅಲ್ಲ, ರಾಜ್ಯದ ಮೂರು ಕೋಟಿ ಜನರು ನನ್ನೊಂದಿಗೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ’ ಎಂದು ಮಾನ್ ಹೇಳಿದ್ದಾರೆ.ಪುರುಷರು ಹಳದಿ (ಬಸಂತಿ) ಟರ್ಬನ್ ಹಾಗೂ ಮಹಿಳೆಯರು ಹಳದಿ ದುಪಟ್ಟಾ ಧರಿಸುವಂತೆ ಅವರು ಮನವಿ ಮಾಡಿದ್ದಾರೆ.

ADVERTISEMENT

ಐಜಿ ಶ್ರೇಣಿಯ ಅಧಿಕಾರಿಗಳನ್ನು ಒಳಗೊಂಡಂತೆ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾರ್ಯಕ್ರಮದ ಭದ್ರತೆಗೆ 10 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ.ಸ್ಥಳದಲ್ಲಿ ಆರೋಗ್ಯ ಸಿಬ್ಬಂದಿ ಹಾಗೂ ಆಂಬುಲೆನ್ಸ್‌ಗಳನ್ನು ನಿಯೋಜಿಸಲಾಗಿದೆ.

50 ಎಕರೆ ಜಾಗದಲ್ಲಿ ಪ್ರಮಾಣವಚನ ಸಮಾರಂಭ ನಡೆಯಲಿದ್ದು, ವಾಹನಗಳ ನಿಲುಗಡೆಗೆಂದೇ 50 ಎಕರೆ ಜಾಗ ಗೊತ್ತುಪಡಿಸಲಾಗಿದೆ. ಕಾರ್ಯಕ್ರಮಕ್ಕೆ ಭಾರಿ ಸಂಖ್ಯೆಯಲ್ಲಿ ಜನರು ಸೇರುವ ನಿರೀಕ್ಷೆಯಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯ ಶಾಲೆಗಳಿಗೆ ಬುಧವಾರ ರಜೆ ನೀಡಲಾಗಿದೆ.

ರಾಜೀನಾಮೆ ಅಂಗೀಕಾರ:ಭಗವಂತ ಮಾನ್ ಅವರು ಲೋಕಸಭೆ ಸದಸ್ಯ ಸ್ಥಾನಕ್ಕೆ ನೀಡಿದ್ದ ರಾಜೀನಾಮೆಯನ್ನು ಸ್ಪೀಕರ್ ಓಂ ಬಿರ್ಲಾ ಅಂಗೀಕರಿಸಿದ್ದಾರೆ. ಮಾನ್‌ ಅವರು ಸಂಗ್ರೂರ್ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.