ಲಖನೌ: ಬಹುಜನ ಸಮಾಜವಾದಿ ಪಕ್ಷದ (ಬಿಎಸ್ಪಿ) ಜೊತೆ ಮೈತ್ರಿ ಮಾಡಿಕೊಳ್ಳಲು ಎಲ್ಲ ಪಕ್ಷಗಳೂ ಬಯಸುತ್ತಿವೆ. ಆದರೆ, ಬಿಜೆಪಿ ನೇತೃತ್ವದ ಎನ್ಡಿಎ ಒಕ್ಕೂಟದ ಜೊತೆಗಾಗಲಿ, ವಿರೋಧ ಪಕ್ಷಗಳ 'ಇಂಡಿಯಾ' ಮೈತ್ರಿಕೂಟದೊಂದಿಗಾಗಲಿ ಕೈ ಜೋಡಿಸುವ ಪ್ರಶ್ನೆಯೇ ಇಲ್ಲ ಎಂದು ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಬುಧವಾರ ಸ್ಪಷ್ಟಪಡಿಸಿದ್ದಾರೆ.
ವಿರೋಧ ಪಕ್ಷಗಳ ಒಕ್ಕೂಟ ‘ಇಂಡಿಯಾ’, 2024ರ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಆಗಸ್ಟ್ 31 ಮತ್ತು ಸೆಪ್ಟೆಂಬರ್ 1ರಂದು ಮುಂಬೈನಲ್ಲಿ ಮಹತ್ವದ ಸಭೆ ನಡೆಸಲಿದೆ. ಇದೇ ವೇಳೆ ಎನ್ಡಿಎ ಒಕ್ಕೂಟವೂ ಸಭೆ ನಿಗದಿಪಡಿಸಿದೆ.
ಈ ಹಿನ್ನೆಲೆಯಲ್ಲಿ ಮಾಯಾವತಿ ಅವರು ತಮ್ಮ ಪಕ್ಷದ ರಾಜಕೀಯ ನಡೆಯ ಕುರಿತು ಮೈಕ್ರೋಬ್ಲಾಗಿಂಗ್ ವೇದಿಕೆ 'ಎಕ್ಸ್' (ಟ್ವಿಟರ್)ನಲ್ಲಿ ಸರಣಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಮಹಾರಾಷ್ಟ್ರ: ‘ಇಂಡಿಯಾ’ ಸಭೆ ವೇಳೆಯೇ ಎನ್ಡಿಎ ಸಭೆ ಆಯೋಜನೆ
'ಬಡವರ ವಿರೋಧಿ, ಜಾತಿವಾದಿ, ಕೋಮು ಮನಸ್ಥಿತಿ, ಉಳ್ಳವರು ಹಾಗೂ ಬಂಡವಾಳಶಾಹಿಗಳ ಪರವಾದ ಚಿಂತನೆಯುಳ್ಳ ಪಕ್ಷಗಳು ಇಂಡಿಯಾ ಮತ್ತು ಎನ್ಡಿಎ ಮೈತ್ರಿಕೂಟದಲ್ಲಿವೆ. ಹಾಗಾಗಿ ಅವರೊಂದಿಗೆ ಸೇರಿ ಚುನಾವಣೆಯಲ್ಲಿ ಸ್ಪರ್ಧಿಸುವ ಪ್ರಶ್ನೆಯೇ ಇಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.
'2007ರಲ್ಲಿ ಸ್ಪರ್ಧಿಸಿದ ಹಾಗೆಯೇ ಮುಂಬರುವ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಲ್ಲಿ ಬಿಎಸ್ಪಿಯು ಏಕಾಂಗಿಯಾಗಿ ಕಣಕ್ಕಿಳಿಯಲಿದೆ. ಸಹೋದರತ್ವದ ಆಧಾರದಲ್ಲಿ ಕೋಟ್ಯಂತರ ಜನರನ್ನು ಒಗ್ಗೂಡಿಸುವ ಉದ್ದೇಶದಿಂದ ಈ ರೀತಿ ಮಾಡಲಾಗುವುದು. ಮಾಧ್ಯಮಗಳು ಮತ್ತೆ ಮತ್ತೆ ಸುಳ್ಳು ಸುದ್ದಿಗಳನ್ನು ಹರಡಬಾರದು' ಎಂದು ಮನವಿ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.