ಕೋಲ್ಕತ್ತ: ‘ಇತ್ತೀಚೆಗೆ ಟಿಎಂಸಿ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಮತ್ತು ಪಕ್ಷದ ಇತರ ಕಾರ್ಯಕರ್ತರ ಮೇಲೆ ನಡೆದ ಹಲ್ಲೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೇ ಹೊಣೆ’ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ದೂರಿದ್ದಾರೆ.
ಇತ್ತೀಚೆಗೆ ಬಿಜೆಪಿ ನೇತೃತ್ವದ ಸರ್ಕಾರವಿರುವ ತ್ರಿಪುರಾದಲ್ಲಿ ಅಭಿಷೇಕ್ ಬ್ಯಾನರ್ಜಿ ಮತ್ತು ಟಿಎಂಸಿ ವಿದ್ಯಾರ್ಥಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆದಿತ್ತು.
ಈ ಹಲ್ಲೆಯಲ್ಲಿ ಗಾಯಗೊಂಡ ಟಿಎಂಸಿ ಕಾರ್ಯಕರ್ತರನ್ನು ಭೇಟಿಯಾದ ಬಳಿಕ ಮಾತನಾಡಿದ ಮಮತಾ ಬ್ಯಾನರ್ಜಿ ಅವರು,‘ತ್ರಿಪುರಾ, ಅಸ್ಸಾಂ, ಉತ್ತರ ಪ್ರದೇಶ ಸೇರಿದಂತೆ ಬಿಜೆಪಿ ಆಡಳಿತವಿರುವ ಎಲ್ಲಾ ರಾಜ್ಯಗಳಲ್ಲಿ ಅರಾಜಕತೆ ಇದೆ. ತ್ರಿಪುರಾದಲ್ಲಿ ಅಭಿಷೇಕ್ ಮತ್ತು ಪಕ್ಷದ ಕಾರ್ಯಕರ್ತರ ಮೇಲಾದ ಹಲ್ಲೆಯನ್ನು ಖಂಡಿಸುತ್ತೇನೆ’ ಎಂದರು.
‘ಕೇಂದ್ರ ಗೃಹ ಸಚಿವರ ಬೆಂಬಲವಿಲ್ಲದೇ ಈ ರೀತಿಯ ದಾಳಿಗಳು ನಡೆಯಲು ಸಾಧ್ಯವಿಲ್ಲ. ಈ ದಾಳಿಗೆ ಅವರೇ ಹೊಣೆ. ಈ ಘಟನೆಗಳು ನಡೆಯುವಾಗ ತ್ರಿಪುರಾ ಪೊಲೀಸರು ಮೂಕ ಪ್ರೇಕ್ಷಕರಂತೆ ನಿಂತಿದ್ದರು. ತ್ರಿಪುರಾದ ಮುಖ್ಯಮಂತ್ರಿಗೆ ಇಂತಹ ದಾಳಿ ನಡೆಸಲು ಆದೇಶ ನೀಡುವಷ್ಟು ಧೈರ್ಯವಿಲ್ಲ. ಈ ರೀತಿಯ ದಾಳಿಗಳಿಗೆ ನಾವು ಹೆದರುವುದಿಲ್ಲ’ ಎಂದು ಅವರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.