ಪಟ್ನಾ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಹುಚ್ಚು ಹಿಡಿದಿದೆ ಎಂದು ಆರ್ಜೆಡಿ ವರಿಷ್ಠ ಲಾಲು ಪ್ರಸಾದ್ ತಿರುಗೇಟು ನೀಡಿದ್ದಾರೆ.
ಬಿಹಾರದ ಮಹಾ ಮೈತ್ರಿ ಸರ್ಕಾರದ ಬಗ್ಗೆ ಅಮಿತ್ ಶಾ ಶುಕ್ರವಾರ ಟೀಕಿಸಿದ್ದರು.
‘ಅಮಿತ್ ಶಾಗೆ ಹುಚ್ಚು ಹಿಡಿದಿದೆ. ಬಿಹಾರದಿಂದ ಅವರ ಸರ್ಕಾರ ಕಿತ್ತೊಗೆಯಲಾಗಿದೆ. 2024ರಲ್ಲೂ ಬಿಜೆಪಿ ಸೋಲನುಭವಿಸಲಿದೆ. ಇದೇ ಕಾರಣಕ್ಕೆ ಅವರು ‘ಜಂಗಲ್ ರಾಜ್’ ಎಂದೆಲ್ಲ ಟೀಕೆ ಮಾಡುತ್ತಿದ್ದಾರೆ. ಅವರು ಗುಜರಾತಿನಲ್ಲಿ ಇದ್ದಾಗ ಏನು ಮಾಡಿದ್ದರು’ ಎಂದು ಯಾದವ್ ಪ್ರಶ್ನಿಸಿದ್ದಾರೆ.
ಅಮಿತ್ ಶಾ ಗುಜರಾತಿನಲ್ಲಿದ್ದಾಗ ಅಲ್ಲಿ ಜಂಗಲ್ ರಾಜ್ ಇತ್ತು ಎಂದು ಲಾಲು ಟೀಕಿಸಿದ್ದಾರೆ.
2024ರಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂಬ ಶಾ ಹೇಳಿಕೆ ಕುರಿತು ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನೋಡಿಯೇ ಬಿಡೋಣ ಎಂದಿದ್ದಾರೆ.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಲಾಲು ಪ್ರಸಾದ್ ಯಾದವ್ ಭಾನುವಾರ ಸಂಜೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗುವ ನಿರೀಕ್ಷೆ ಇದೆ.
ಶುಕ್ರವಾರ ಬಿಹಾರದ ಪೂರ್ಣಿಯಾದಲ್ಲಿ ರ್ಯಾಲಿ ಉದ್ದೇಶಿಸಿ ಮಾತನಾಡಿದ್ದ ಅಮಿತ್ ಶಾ, ಮಹಾ ಮೈತ್ರಿ ಸರ್ಕಾರ ಮತ್ತು ನಿತೀಶ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದರು.
ನಿತೀಶ್ ಕುಮಾರ್ ಅವರು ಪ್ರಧಾನಿಯಾಗುವ ಆಸೆಯಿಂದ ಬಿಜೆಪಿಯ ಬೆನ್ನಿಗೆ ಚೂರಿ ಹಾಕಿದ್ದಾರೆ. ಅವರು 2014ರಲ್ಲಿಯೂ ಹೀಗೆಯೇ ಮಾಡಿದ್ದರು. 2024ರ ಲೋಕಸಭೆ ಚುನಾವಣೆಯಲ್ಲಿ ಬಿಹಾರದ ಜನತೆ ‘ಮಹಾ ಮೈತ್ರಿ’ಗೆ ತಕ್ಕ ಪಾಠ ಕಲಿಸಲಿದ್ದಾರೆ. ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ದೊರೆಯಲಿದ್ದು, ಸರ್ಕಾರ ರಚಿಸಲಿದೆ ಎಂದು ಶಾ ಹೇಳಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.