ADVERTISEMENT

ತೌಕ್ತೆ ಚಂಡಮಾರುತ: ಮಹಾರಾಷ್ಟ್ರ, ಗುಜರಾತ್‌ ಸಿಎಂಗಳೊಂದಿಗೆ ಅಮಿತ್‌ ಶಾ ಚರ್ಚೆ

ಏಜೆನ್ಸೀಸ್
Published 16 ಮೇ 2021, 8:29 IST
Last Updated 16 ಮೇ 2021, 8:29 IST
ಗೋವಾ ಕರಾವಳಿ
ಗೋವಾ ಕರಾವಳಿ   

ನವದೆಹಲಿ: ತೌಕ್ತೆ ಚಂಡಮಾರುತದ ಹಿನ್ನೆಲೆಯಲ್ಲಿ ಗುಜರಾತ್‌ ಹಾಗೂ ಮಹಾರಾಷ್ಟ್ರದ ಮುಖ್ಯಮಂತ್ರಿಗಳೊಂದಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪರಿಶೀಲನಾ ಸಭೆ ನಡೆಸಿದ್ದಾರೆ.

ಚಂಡಮಾರುತವನ್ನು ಎದುರಿಸಲು ರಾಜ್ಯ ಸರ್ಕಾರಗಳು ಕೈಗೊಂಡ ಪರಿಹಾರ ಕಾರ್ಯ ಮತ್ತು ಮುಂಜಾಗ್ರತಾ ಕ್ರಮಗಳ ಬಗ್ಗೆ ಅಮಿತ್‌ ಶಾ ಮಾಹಿತಿ ಪಡೆದಿದ್ದಾರೆ.

ಪರಿಸ್ಥಿತಿಯನ್ನು ಎದುರಿಸುವ ನಿಟ್ಟಿನಲ್ಲಿ ಕೇಂದ್ರವು ರಾಜ್ಯ ಸರ್ಕಾರಗಳೊಂದಿಗೆ ಕೈಜೋಡಿಸಲಿದೆ ಎಂಬ ಭರವಸೆಯನ್ನೂ ಅಮಿತ್‌ ಶಾ ನೀಡಿದ್ದಾರೆ.

ADVERTISEMENT

ಇಂದು(ಭಾನುವಾರ) ಬೆಳಿಗ್ಗೆ ಗೋವಾದ ಕರಾವಳಿ ಭಾಗಗಳಲ್ಲಿ ಚಂಡಮಾರುತ ಅಪ್ಪಳಿಸಿದೆ. ಇದರಿಂದಾಗಿ ಗೋವಾದಲ್ಲಿ ಭಾರಿ ಹಾನಿ ಸಂಭವಿಸಿದೆ.

ಮಹಾರಾಷ್ಟ್ರದ ರಾಜಧಾನಿ ಮುಂಬೈನಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಗುಜರಾತ್‌ನತ್ತ ಸಾಗಿರುವ ಚಂಡಮಾರುತ, ಪೋರಬಂದರ್‌ ಹಾಗೂ ನಲಿಯಾ ನಡುವಿನ ಕರಾವಳಿ ಪ್ರದೇಶವನ್ನು ಮೇ 18ರ ವೇಳೆಗೆ ದಾಟುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಶನಿವಾರ ತಿಳಿಸಿದೆ.

ಮೇ 16ರಿಂದ 18ರ ವರೆಗಿನ ಅವಧಿಯಲ್ಲಿ ತೌಕ್ತೆ ಚಂಡಮಾರುತ ಹೆಚ್ಚು ತೀವ್ರವಾಗಿರಲಿದೆ ಎಂದೂ ಹವಾಮಾನ ಇಲಾಖೆ ಹೇಳಿದೆ.

ಚಂಡಮಾರುತದಿಂದ ಉದ್ಭವಿಸುವ ಸಂಕಷ್ಟ ಪರಿಸ್ಥಿತಿಯನ್ನು ಎದುರಿಸಲು ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆಯ (ಎನ್‌ಡಿಆರ್‌ಎಫ್‌) 100 ತಂಡಗಳನ್ನು ಸಜ್ಜಗೊಳಿಸಲಾಗಿದೆ. ಈ ಮೊದಲು 53 ತಂಡಗಳನ್ನು ರಚಿಸಲಾಗಿತ್ತು. ಶನಿವಾರದ ವೇಳೆ ಈ ಪ್ರಾಕೃತಿಕ ವಿಕೋಪ ತೀವ್ರ ಸ್ವರೂಪ ಪಡೆದ ಕಾರಣ, ಪರಿಹಾರ ಕಾರ್ಯಕ್ಕೆ ಚುರುಕು ನೀಡುವ ಸಂಬಂಧ ತಂಡಗಳ ಸಂಖ್ಯೆಯನ್ನು 100ಕ್ಕೆ ಹೆಚ್ಚಿಸಲಾಗಿದೆ.

ಕೇರಳದ ಉತ್ತರ ಹಾಗೂ ಕೇಂದ್ರ ಭಾಗದಲ್ಲಿರುವ, ಕರ್ನಾಟಕದ ದಕ್ಷಿಣ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿರುವ ಜಲಾನಯನ ಪ್ರದೇಶಗಳಲ್ಲಿ ಹೆಚ್ಚು ಹಾನಿ ಸಾಧ್ಯತೆ ಕುರಿತು ಕೇಂದ್ರೀಯ ಜಲ ಆಯೋಗ ಎಚ್ಚರಿಕೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.