ADVERTISEMENT

ಕೋಲ್ಕತ್ತಾ: ಸಂಸ್ಕೃತ ಭಾಷೆಗೆ ಉಪನ್ಯಾಸಕರಾಗಿ ಮುಸ್ಲಿಂ ವ್ಯಕ್ತಿ ನೇಮಕ

ಪಿಟಿಐ
Published 22 ನವೆಂಬರ್ 2019, 20:15 IST
Last Updated 22 ನವೆಂಬರ್ 2019, 20:15 IST
ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ.
ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ.   

ಕೋಲ್ಕತ್ತಾ: ಇಲ್ಲಿನ ಬೆಲುಡ್‌ನಲ್ಲಿರುವ ರಾಮಕೃಷ್ಣ ಮಿಷನ್‌ ವಿದ್ಯಾಮಂದಿರದ ಸಂಸ್ಕೃತ ಭಾಷಾ ವಿಷಯಕ್ಕೆ ಸಹಾಯಕ ಪ್ರಾಧ್ಯಾಪಕರನ್ನಾಗಿ ರಂಜಾನ್‌ ಅಲಿ ಅವರನ್ನು ನೇಮಕ ಮಾಡಲಾಗಿದೆ.

ಉತ್ತರ ಪ್ರದೇಶದ ಬನಾರಸ್‌ ಹಿಂದೂ ವಿಶ್ವವಿದ್ಯಾಲಯದಲ್ಲಿ ಫಿರೋಜ್‌ ಖಾನ್‌ ಅವರು ಸಂಸ್ಕೃತ ಪಾಠ ಮಾಡುವುದುನ್ನು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ವಿರೋಧಿಸುತ್ತಿದ್ದಾರೆ. ಈ ಹೊತ್ತಿನಲ್ಲೇ ರಂಜಾನ್‌ ಅಲಿ ಅವರು ಮಂಗಳವಾರ ಸಂಸ್ಕೃತ ಉಪನ್ಯಾಸಕರಾಗಿ ಕೆಲಸಕ್ಕೆ ಹಾಜರಾದರು.

ಬನಾರಸ್‌ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳ ಪ್ರತಿಭಟನೆ ಕುರಿತು ಮಾತನಾಡಿದ ರಂಜಾನ್‌, ‘ಅಧ್ಯಾಪಕನ ಧರ್ಮ ಇಟ್ಟುಕೊಂಡು ಆತ ಸಂಸ್ಕೃತವನ್ನು ಪಾಠ ಮಾಡಬಾರದು ಎಂದು ವಿರೋಧಿಸುವುದು ಸರಿಯಲ್ಲ’ ಎಂದು ಅಭಿಪ್ರಾಯಪಟ್ಟರು.

ADVERTISEMENT

ಸಂಸ್ಕೃತ ಉಪನ್ಯಾಸಕರ ಪರಂಪರೆ: ಅಲಿಘಡ (ಪಿಟಿಐ): ಬನಾರಸ್‌ ಹಿಂದೂ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆ ಬೆನ್ನಲ್ಲೇ, ಅಲಿಘಡ ಮುಸ್ಲಿಂ ವಿಶ್ವವಿದ್ಯಾಲಯದ ಉಪನ್ಯಾಸಕರು, ವಿವಿಯಲ್ಲಿ ಮುಸಲ್ಮಾನರು ಸಂಸ್ಕೃತವನ್ನು ಭಾಷೆಯಾಗಿ ಅಧ್ಯಯನ ಮಾಡಿ, ಉಪನ್ಯಾಸಕರೂ ಆದ ಪರಂಪರೆಯನ್ನು ನೆನಪಿಸಿಕೊಂಡರು.

‘ಸಂಸ್ಕೃತದಲ್ಲಿ ಪಿಎಚ್‌.ಡಿ ಮಾಡಿದ ಮೊದಲ ಮುಸ್ಲಿಂ ವ್ಯಕ್ತಿ ಎಎಂಯುನ ವಿಧ್ವಾಂಸರಾಗಿದ್ದರು. ಪ್ರಸ್ತುತ ವಿವಿಯ ಸಂಸ್ಕೃತ ವಿಭಾಗದಲ್ಲಿ ಇರುವ ಒಂಬತ್ತು ಉಪನ್ಯಾಸಕರಲ್ಲಿ ಇಬ್ಬರು ಮುಸಲ್ಮಾನರು’ ಎಂದು ಉಪನ್ಯಾಸಕರು ಹೇಳಿದರು.

ತರಗತಿಗಳು ಪುನರಾರಂಭ: ಬನಾರಸ್‌ ಹಿಂದೂ ವಿಶ್ವವಿದ್ಯಾಲಯದಲ್ಲಿ ಕೆಲವು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿರುವ ಮಧ್ಯೆಯೇ ಸಂಸ್ಕೃತ ವಿಭಾಗದ ತರಗತಿಗಳು ಶುಕ್ರವಾರ ಪುನರಾರಂಭಗೊಂಡಿವೆ.

ಪ್ರತಿಭಟನೆ ನಡಸುತ್ತಿರುವವರಲ್ಲಿ ಹಲವರು ಎಬಿವಿಪಿ ಸಂಘಟನೆಗೆ ಸೇರಿದವರಾಗಿದ್ದಾರೆ. ಶುಕ್ರವಾರ ಕೆಲವು ಗಂಟೆಗಳವರೆಗೆ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು, ನಂತರ ಪ್ರತಿಭಟನೆಯನ್ನು ಕೈಬಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.