ADVERTISEMENT

ನಿಯಮಗಳಿರುವುದು ವಿರೋಧ ಪಕ್ಷಗಳಿಗೆ ಮಾತ್ರವೇ? –ಜೈರಾಮ್ ರಮೇಶ್ ಪ್ರಶ್ನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 31 ಜುಲೈ 2022, 14:29 IST
Last Updated 31 ಜುಲೈ 2022, 14:29 IST
ರಾಜ್ಯಸಭೆ ಸದಸ್ಯ ಜೈರಾಮ್‌ ರಮೇಶ್‌
ರಾಜ್ಯಸಭೆ ಸದಸ್ಯ ಜೈರಾಮ್‌ ರಮೇಶ್‌   

ನವದೆಹಲಿ:ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಲೋಕಸಭೆ ಕಾಂಗ್ರೆಸ್‌ ನಾಯಕ ಅಧೀರ್‌ ರಂಜನ್‌ ಚೌಧರಿ ಅವರು 'ರಾಷ್ಟ್ರಪತ್ನಿ' ಎಂದು ಸಂಬೋಧಿಸಿದ್ದ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಲೋಕಸಭೆಯಲ್ಲಿ ಅತಿರೇಕದಿಂದ ವರ್ತಿಸಿದ್ದಾರೆ. ಅವರನ್ನು ಸ್ಪೀಕರ್‌ ಪ್ರಶ್ನಿಸುತ್ತಾರೆಯೇ ಎಂದು ರಾಜ್ಯಸಭೆ ಸದಸ್ಯ ಜೈರಾಮ್‌ ರಮೇಶ್‌ ಪ್ರಶ್ನಿಸಿದ್ದಾರೆ.

ಚೌಧರಿ ಅವರು ಬುಧವಾರ ಲೋಕಸಭೆಯಲ್ಲಿ ಮುರ್ಮು ಅವರನ್ನು'ರಾಷ್ಟ್ರಪತ್ನಿ' ಎಂದು ಸಂಬೋಧಿಸಿ ವಿವಾದ ಸೃಷ್ಟಿಸಿದ್ದರು. ಬಿಜೆಪಿ ಸದಸ್ಯರು ಚೌಧರಿ ಹೇಳಿಕೆಯನ್ನು ಖಂಡಿಸಿ, ಪ್ರತಿಭಟನೆ ನಡೆಸಿದರು. ಇದರಿಂದಾಗಿ ಕಲಾಪವನ್ನು ಸಂಜೆ 4ಗಂಟೆಗೆ ಮುಂದೂಡಲಾಗಿದೆ.

ಈ ವೇಳೆಸದನದಿಂದ ಹೊರ ನಡೆಯುತ್ತಿದ್ದ ಸೋನಿಯಾ ಗಾಂಧಿ ಅವರ ವಿರುದ್ಧ ಬಿಜೆಪಿಯ ಕೆಲ ಮಹಿಳಾ ಸಂಸದರು ಘೋಷಣೆ ಕೂಗಿದ್ದಾರೆ. ಇದರಿಂದ ಸಿಟ್ಟಾದ ಸೋನಿಯಾ ಗಾಂಧಿ,ಸಂಸದೆ ರಮಾದೇವಿ ಅವರತ್ತತೆರಳಿ, ಚೌಧರಿ ಈಗಾಗಲೇ ಕ್ಷಮೆ ಕೋರಿದ್ದಾರೆ. ಹೀಗಿರುವಾಗ ತಮ್ಮ ಹೆಸರನ್ನು ಎಳೆದು ತರುತ್ತಿರುವುದೇಕೆ ಎಂದು ಪ್ರಶ್ನಿಸಿದ್ದಾರೆ ಎಂದು ವರದಿಯಾಗಿದೆ.

ADVERTISEMENT

ಇದೇ ವೇಳೆ ಸದನದಲ್ಲಿದ್ದ ಸಚಿವೆ ಸ್ಮೃತಿ ಇರಾನಿ, ಮಧ್ಯಪ್ರವೇಶಿಸಲು ಪ್ರಯತ್ನಿಸಿದ್ದಾರೆ. ಆಗ, ತಮ್ಮೊಂದಿಗೆ ಮಾತನಾಡದಂತೆ ಸ್ಮೃತಿಗೆ ಸೋನಿಯಾ ತಾಕೀತು ಮಾಡಿದ್ದಾರೆ. ಬಳಿಕ ಎನ್‌ಸಿಪಿಯ ಸುಪ್ರಿಯಾ ಸುಳೆ ಮತ್ತು ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಸದಸ್ಯರನ್ನು ಸಮಾಧಾನಪಡಿಸಲು ಪ್ರಯತ್ನಿಸಿದ್ದಾರೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ಟ್ವಿಟರ್‌ನಲ್ಲಿ ಕಿಡಿಕಾರಿರುವ ಕಾಂಗ್ರೆಸ್ ರಾಜ್ಯಸಭೆ ಸದಸ್ಯೆ ಜೈರಾಮ್‌ ರಮೇಶ್‌, 'ಲೋಕಸಭೆಯಲ್ಲಿ ಇಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಅಮಾನವೀಯ ಮತ್ತು ಅತಿರೇಕದಿಂದ ವರ್ತಿಸಿದ್ದಾರೆ. ಆದರೆ, ಅವರನ್ನು ಸ್ಪೀಕರ್ ಪ್ರಶ್ನಿಸುತ್ತಾರೆಯೇ? ನಿಯಮಗಳಿರುವುದು ವಿರೋಧ ಪಕ್ಷದವರಿಗೆ ಮಾತ್ರವೇ?' ಎಂದು ಕೇಳಿದ್ದಾರೆ.

ವಿವಾದದ ಹಿನ್ನೆಲೆಯಲ್ಲಿ ಅಧೀರ್ ರಂಜನ್ ಚೌಧರಿ ಹೇಳಿಕೆ ಬಿಡುಗಡೆ ಮಾಡಿದ್ದು, ‘ತಪ್ಪಾಗಿ ಮಾತು ಹೊರಳಿದೆ. ಅದಕ್ಕಾಗಿ ಕ್ಷಮೆ ಯಾಚಿಸಿದ್ದೇನೆ. ಮಾತಾಡುವ ಭರದಲ್ಲಿ ಆದ ತಪ್ಪಿನ ಬಗ್ಗೆ ಬಿಜೆಪಿ ಗೊಂದಲ ಸೃಷ್ಟಿಸುತ್ತಿದೆ’ ಎಂದು ಹೇಳಿದ್ದಾರೆ.

ಹಾಗೆಯೇ,ಈ ವಿವಾದದಲ್ಲಿ ಸೋನಿಯಾ ಹೆಸರನ್ನು ಎಳೆದು ತರುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಚೌಧರಿ, 'ಅವರು ಬಯಸುವುದಾದರೆ, ನನ್ನನ್ನು ನೇಣಿಗೇರಿಸಲಿ. ನಾನು ಶಿಕ್ಷೆ ಅನುಭವಿಸಲು ಸಿದ್ಧ. ಆದರೆ, ಅವರನ್ನು (ಸೋನಿಯಾ ಗಾಂಧಿ) ಈ ವಿಚಾರದಲ್ಲಿ ಎಳೆದು ತರುತ್ತಿರುವುದು ಏಕೆ?' ಎಂದೂ ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.