ಲಖನೌ: ಉತ್ತರ ಪ್ರದೇಶದ ಬುಲಂದ್ಶಹರ್ನಲ್ಲಿ ಈಚೆಗೆ ನಡೆದಿದ್ದ ಹಿಂಸಾಚಾರ ಮತ್ತು ಪೊಲೀಸ್ ಇನ್ಸ್ಪೆಕ್ಟರ್ ಹತ್ಯೆ ಆರೋಪ ಹೊತ್ತಿರುವಯೋಧ ಜಿತೇಂದ್ರ ಮಲಿಕ್ನನ್ನು ಸೇನೆಯು ಉತ್ತರ ಪ್ರದೇಶ ಪೊಲೀಸರಿಗೆ ಶನಿವಾರ ಮಧ್ಯರಾತ್ರಿ ಒಪ್ಪಿಸಿದೆ ಎಂದು ಎನ್ಡಿಟಿವಿ ವರದಿ ಮಾಡಿದೆ.
‘ಸೇನೆಯಲ್ಲಿ ಯೋಧನಾಗಿರುವ ಜಿತೇಂದ್ರನನ್ನು ನಾವು ಬಂಧಿಸಿದ್ದೇವೆ. ಭಾನುವಾರ ಮಧ್ಯರಾತ್ರಿ 12:50ಕ್ಕೆ ಜಿತೇಂದ್ರನನ್ನು ಸೇನೆ ನಮ್ಮ ವಶಕ್ಕೆ ಒಪ್ಪಿಸಿತು. ಪ್ರಾಥಮಿಕ ವಿಚಾರಣೆ ಮುಗಿದಿದೆ. ಅವನನ್ನು ಬುಲಂದ್ಶಹರ್ಗೆ ಕಳಿಸುತ್ತೇವೆ. ನಂತರ ನ್ಯಾಯಾಲಯದ ಮುಂದೆ ಹಾಜರುಪಡಿಸುತ್ತೇವೆ’ ಎಂದು ಉತ್ತರ ಪ್ರದೇಶದ ಹಿರಿಯ ಪೊಲೀಸ್ ಅಧಿಕಾರಿ ಅಭಿಷೇಕ್ ಸಿಂಗ್ ಮೀರತ್ನಲ್ಲಿ ಹೇಳಿದರು.
ಜಮ್ಮು ಮತ್ತು ಕಾಶ್ಮೀರದ ಸೊಪೊರ್ ನಗರದಲ್ಲಿ ಜಿತೇಂದ್ರನನ್ನು ಬಂಧಿಸಲಾಯಿತು. ಸೇನೆಯ ‘ರಾಷ್ಟ್ರೀಯ ರೈಫಲ್ಸ್’ನಲ್ಲಿ ಕೆಲಸ ಮಾಡುತ್ತಿದ್ದ ಜಿತೇಂದ್ರ 15 ದಿನಗಳ ರಜೆಯ ಮೇಲೆ ತನ್ನ ಸ್ವಂತ ಊರು ಬುಲಂದ್ಶಹರ್ಗೆ ಬಂದಿದ್ದ. ಹಿಂಸಾಚಾರದ ಸಂದರ್ಭ ಹಲವರು ರೆಕಾರ್ಡ್ ಮಾಡಿರುವ ವಿಡಿಯೊಗಳಲ್ಲಿ ಎದ್ದು ಕಾಣುತ್ತಾನೆ. ಇನ್ಸ್ಪೆಕ್ಟರ್ ಸುಬೋಧ್ ಕುಮಾರ್ ಸಿಂಗ್ ಮತ್ತು ಓರ್ವ ನಾಗರಿಕಕೊಲೆಯಾದ ನಂತರ ಈತ ಸೊಪೊರ್ಗೆ ಓಡಿ ಹೋಗಿದ್ದ.
‘ಪೊಲೀಸ್ ಇನ್ಸ್ಪೆಕ್ಟರ್ ಮೇಲೆ ಜಿತೇಂದ್ರ ಗುಂಡು ಹಾರಿಸಿದ್ದು ನಿಜವೇ’ ಎನ್ನುವ ಎನ್ಡಿಟಿವಿ ವರದಿಗಾರರ ಪ್ರಶ್ನೆಗೆ ಪೊಲೀಸರು ‘ಇಷ್ಟು ಬೇಗ ಏನನ್ನೂ ಹೇಳಲು ಸಾಧ್ಯವಿಲ್ಲ’ ಎಂದಷ್ಟೇ ಪ್ರತಿಕ್ರಿಯಿಸಿದ್ದಾರೆ.
ಸಂಬಂಧಿಸಿದ ಸುದ್ದಿಗಳು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.