ADVERTISEMENT

ಜಮ್ಮು ಮತ್ತು ಕಾಶ್ಮೀರದಲ್ಲಿ 370, 35ಎ ವಿಧಿಯಿಂದಾಗಿ ಭಯೋತ್ಪಾದನೆ: ಲೆ.ಗರ್ವನರ್

ಪಿಟಿಐ
Published 7 ಜುಲೈ 2021, 5:29 IST
Last Updated 7 ಜುಲೈ 2021, 5:29 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಸಂವಿಧಾನದ 370 ಹಾಗೂ 35ಎ ವಿಧಿಗಳು ಪ್ರತ್ಯೇಕತಾವಾದ, ಭಯೋತ್ಪಾದನೆ, ಸ್ವಜನಪಕ್ಷಪಾತ ಮತ್ತು ಬೃಹತ್ ಪ್ರಮಾಣದ ಭ್ರಷ್ಟಾಚಾರ ಮಾತ್ರ ನೀಡಿದೆ ಎಂದು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಹೇಳಿದ್ದಾರೆ.

2019ರಲ್ಲಿ ವಿಶೇಷ ಸ್ಥಾನಮಾನ ನೀಡುವ ಈ ವಿಧಿಗಳನ್ನು ರದ್ದುಗೊಳಿಸಲಾಗಿತ್ತು.

ರಾಜಭವನದಲ್ಲಿ 'ಆಜಾದಿ ಕ ಅಮೃತ ಮಹೋತ್ಸವ' ಕಾರ್ಯಕ್ರಮದ ಅಂಗವಾಗಿ ಭಾರತೀಯ ಜನಸಂಘದ ಸ್ಥಾಪಕರಾದ ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಜನ್ಮ ದಿನದಂದು ರಾಷ್ಟ್ರೀಯ ವೆಬಿನಾರ್ ಉದ್ಘಾಟಿಸಿ ಮಾತನಾಡಿದ ಲೆ. ಗವರ್ನರ್, ಸಮಗ್ರ ಹಾಗೂ ಆಧುನಿಕ ಭಾರತದ ವಾಸ್ತುಶಿಲ್ಪಿ ಎಂದು ನೆನಪಿಸಿಕೊಂಡರು.

ADVERTISEMENT

ಶ್ಯಾಮ್ ಪ್ರಸಾದ್ ಕೊಡುಗೆಗಳನ್ನು ಸ್ಮರಿಸಿದ ಮನೋಜ್ ಸಿನ್ಹಾ, 'ಒಂದು ಸಂವಿಧಾನ', 'ಒಬ್ಬ ನಾಯಕ', ಮತ್ತು 'ಒಂದು ಧ್ವಜ' ಗುರಿಯನ್ನು ಸಾಧಿಸಲು ಅವರ ಹೋರಾಟವು ಕ್ರಾಂತಿಕಾರಿಯಾಗಿದ್ದು, ಅದಕ್ಕಾಗಿ ಹೋರಾಡಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ್ದರು ಎಂದು ಹೇಳಿದರು.

ಜಮ್ಮು ಮತ್ತು ಕಾಶ್ಮೀರವನ್ನು ದೇಶದ ಇತರೆ ರಾಜ್ಯಗಳಂತೆ ನೋಡಲು ಬಯಸಿದ್ದ ಮುಖರ್ಜಿ, ಉಳಿದ ಭಾಗಗಳ ಜನರಂತೆ ಜಮ್ಮು ಮತ್ತು ಕಾಶ್ಮೀರ ಜನರ ಹಕ್ಕುಗಳಿಗಾಗಿ ಪ್ರತಿಪಾದಿಸಿದ್ದರು ಎಂದು ಹೇಳಿದರು.

2019 ಆಗಸ್ಟ್ 5ರಂದು ದೇಶದೊಂದಿಗೆ ಜಮ್ಮು ಮತ್ತು ಕಾಶ್ಮೀರವನ್ನು ಏಕೀಕರಿಸುವ ಮೂಲಕ ಮುಖರ್ಜಿ ಅವರ ಕನಸನ್ನು ಈಡೇರಿಸಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಕೃತಜ್ಞತೆಯನ್ನು ಸಲ್ಲಿಸಲು ಬಯಸುತ್ತೇನೆ ಎಂದಿದ್ದಾರೆ.

ಸಂವಿಧಾನದ 370 ಹಾಗೂ 35ಎ ವಿಧಿಯು ಪ್ರತ್ಯೇಕತಾವಾದ, ಭಯೋತ್ಪಾದನೆ, ಸ್ವಜನಪಕ್ಷಪಾತ ಮತ್ತು ಭಷ್ಟ್ರಚಾರವನ್ನು ನೀಡಿದೆ. ಜಮ್ಮು ಕಾಶ್ಮೀರಯದಲ್ಲಿ ಅಭಿವೃದ್ಧಿಗೆ ಸಂಪರ್ಕಿಸುವ ಒಂದೇ ಒಂದು ನಿಬಂಧನೆ ಅದರಲ್ಲಿರಲಿಲ್ಲ. ಇದರಿಂದಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ವರ್ಷದಲ್ಲಿ ಎರಡು ಬಾರಿ ಮಾತ್ರ ದೇಶ ಧ್ವಜ ಹಾರಿಸಲಾಗುತ್ತಿತ್ತು. ಆದರೆ ಈಗ ರಾಜ್ಯದ ಪ್ರತಿಯೊಂದು ಸರ್ಕಾರಿ ಕಟ್ಟಡ, ಪ್ರತಿ ಶಾಲೆಯಲ್ಲೂ ಹೆಮ್ಮೆಯಿಂದ ಧ್ವಜ ಹಾರಿಸಲಾಗುತ್ತಿದೆ ಎಂದು ಹೇಳಿದರು.

ಈ ವಿಧಿಯು ಜಮ್ಮು ಮತ್ತು ಕಾಶ್ಮೀರದ ನಾಯಕರಿಗೆ ನಾಯಕತ್ವದ ಅವಕಾಶಗಳನ್ನು ನೀಡಲಿಲ್ಲ. ಆದರೆ ಇಂದು ಯುವಕರು ಚೊಚ್ಚಲ ರಾಜಕೀಯಕ್ಕೆ ಯಶಸ್ವಿಯಾಗಿ ಪ್ರವೇಶಿಸಿದ್ದಾರೆ. ಇಂದು ಜಮ್ಮು ಮತ್ತು ಕಾಶ್ಮೀರ ಅಭಿವೃದ್ಧಿಯ ಪಥದತ್ತ ಸಾಗುತ್ತಿದ್ದು, ಇದು ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಂದಾಗಿ ಸಾಧ್ಯವಾಗಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.