
ನವದೆಹಲಿ: ಗಾಜಾಪಟ್ಟಿಯಲ್ಲಿ ನಡೆದ ದಾಳಿಗೆ ಸಂಬಂಧಿಸಿದಂತೆ ’ಅವಿವೇಕದ ಹೇಳಿಕೆ’ ನೀಡಿದ ಚಿತ್ರೋತ್ಸವದ ತೀರ್ಪುಗಾರರ ನಡೆ ಖಂಡಿಸಿ ಬರ್ಲಿನ್ನಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾಗವಹಿಸುವುದಿಲ್ಲ ಎಂದು ಕಾದಂಬರಿಕಾರ್ತಿ ಆರುಂಧತಿ ರಾಯ್ ಹೇಳಿದ್ದಾರೆ.
ರಾಯ್ ಅವರು, 1989ರಲ್ಲಿ ಬಿಡುಗಡೆಯಾದ ‘ಇನ್ ವಿಚ್ ಆ್ಯನಿ ಗೀವ್ಸ್ ಇಟ್ ದೋಸ್ ಒನ್ಸ್’ ಚಿತ್ರದ ಪ್ರದರ್ಶನದಲ್ಲಿ ಭಾಗವಹಿಸಲು ಚಿತ್ರೋತ್ಸವಕ್ಕೆ ಹಾಜರಾಗಬೇಕಿತ್ತು.
ಬರ್ಲಿನ್ ಚಿತ್ರೋತ್ಸವದ ತೀರ್ಪುಗಾರರು ಶುಕ್ರವಾರ ಬೆಳಿಗ್ಗೆ ಗಾಜಾದಲ್ಲಿ ನಡೆದ ದಾಳಿಗೆ ಸಂಬಂಧಿಸಿದಂತೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸುವಾಗ, ‘ಕಲೆ ರಾಜಕೀಯವಾಗಬಾರದು’ ಎಂದು ಹೇಳಿರುವುದು ನಿಜಕ್ಕೂ ಅಚ್ಚರಿ ಮೂಡಿಸಿದೆ. ಗಾಜಾದಲ್ಲಿ ನಡೆದಿರುವುದು ಮಾನವೀಯತೆಯ ವಿರುದ್ಧದದ ಅಪರಾಧ. ಅದನ್ನು ತಡೆಯಲು ಕಲಾವಿದರು, ಲೇಖಕರು, ಚಲನಚಿತ್ರ ನಿರ್ಮಾಪಕರು ಶಕ್ತಿ ಮೀರಿ ಪ್ರಯತ್ನಿಸುತ್ತಿರುವಾಗ, ತೀರ್ಪುಗಾರರು ಈ ರೀತಿಯ ಹೇಳಿಕೆ ನೀಡಿರುವುದು ಆಘಾತಕಾರಿಯಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬರ್ಲಿನ್ ಚಿತ್ರೋತ್ಸವದ ತೀರ್ಪುಗಾರರ ಸಮಿತಿಯ ಅಧ್ಯಕ್ಷ ಮತ್ತು ಜರ್ಮನಿಯ ಚಿತ್ರ ನಿರ್ದೇಶಕ ವಿಮ್ ವೆಂಡರ್ಸ್, ’ಚಿತ್ರ ನಿರ್ಮಾಪಕರು ರಾಜಕೀಯದಿಂದ ದೂರ ಇರಬೇಕು’ ಎಂದು ಶುಕ್ರವಾರ ಬೆಳಿಗ್ಗೆ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.