ಸೂರತ್ (ಗುಜರಾತ್): ಗುಜರಾತ್ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಎಎಪಿ ಗಮನಾರ್ಹ ಸಾಧನೆ ಮಾಡಿದೆ. ಇದರಂತೆ ಶುಕ್ರವಾರ ಸೂರತ್ಗೆ ಭೇಟಿ ನೀಡಿರುವ ದೆಹಲಿ ಮುಖ್ಯಮಂತ್ರಿ ಹಾಗೂ ಎಎಪಿ ಮುಖಂಡ ಅರವಿಂದ್ ಕೇಜ್ರಿವಾಲ್ ಅಲ್ಲಿನ ಜನತೆಗೆಧನ್ಯವಾದಗಳನ್ನು ಸಲ್ಲಿಸಿದ್ದಾರೆ.
ಗುಜರಾತ್ ಪಾಲಿಕೆ ಚುನಾವಣೆಯಲ್ಲಿ ಎಎಪಿ 27 ಸೀಟುಗಳಲ್ಲಿ ಗೆಲುವು ಬಾರಿಸಿದೆ. ನಾನು ಸೂರತ್ ಜನರಿಗೆ ಧನ್ಯವಾದ ಸಲ್ಲಿಸಲು ಆಗಮಿಸಿದ್ದೇನೆ ಎಂದು ಕೇಜ್ರಿವಾಲ್ ತಿಳಿಸಿದರು.
ಮಧ್ಯಾಹ್ನದ ಬಳಿಕ ರೋಡ್ ಶೋನದಲ್ಲಿ ಕೇಜ್ರಿವಾಲ್ ಭಾಗವಹಿಸಲಿದ್ದಾರೆ. ಹಾಗೆಯೇ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಸೂರತ್ ಮುನ್ಸಿಪಲ್ ಕಾರ್ಪೋರೇಷನ್ಗೆ (ಎಸ್ಎಂಸಿ) ನಡೆದ ಚುನಾವಣೆಯಲ್ಲಿ ಎಎಪಿ 27 ಸ್ಥಾನಗಳಲ್ಲಿ ಜಯಭೇರಿ ಮೊಳಗಿಸಿತ್ತು.
ಇದನ್ನೂ ಓದಿ:ಎನ್ಎಂಸಿಯಿಂದ ಪಾರದರ್ಶಕತೆ: ಮೋದಿ
120 ಸೀಟುಗಳ ಪೈಕಿ ಬಿಜೆಪಿ 93ರಲ್ಲಿ ಗೆಲುವು ದಾಖಲಿಸಿದರೂ ಎಎಪಿ ಸಾಧನೆ ಹೆಚ್ಚಿನ ಗಮನ ಸೆಳೆದಿದೆ. 2015ರಲ್ಲಿ 36 ಸೀಟುಗಳನ್ನು ಗೆದ್ದಿದ್ದ ಕಾಂಗ್ರೆಸ್ಗೆ ಒಂದೇ ಒಂದು ಸೀಟು ಗೆಲ್ಲಲು ಸಾಧ್ಯವಾಗಲಿಲ್ಲ.
ನಾವು 27 ಸೀಟುಗಳಲ್ಲಿ ಗೆದ್ದಿದ್ದು, ಅವರು (ಬಿಜೆಪಿ) 93 ಸೀಟುಗಳಲ್ಲಿ ಜಯ ಗಳಿಸಿದೆ. ಆದರೆ ಅಂಕಿ ಬಗ್ಗೆ ನಾವು ಚಿಂತಿತರಾಗಿಲ್ಲ. ಸೂರತ್ ಜನರು ನಮಗೆವಿರೋಧ ಪಕ್ಷದ ಜವಾಬ್ದಾರಿಯನ್ನು ನೀಡಿದ್ದಾರೆ ಎಂದು ಕೇಜ್ರಿವಾಲ್ ಹೇಳಿದರು.
ಒಟ್ಟಾರೆಯಾಗಿ ಆರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ 576 ಸೀಟುಗಳ ಪೈಕಿ 483ರಲ್ಲಿ ಪ್ರಚಂಡ ಗೆಲುವು ದಾಖಲಿಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.