ADVERTISEMENT

ದೆಹಲಿ | ಪ್ರವಾಹ ಪರಿಸ್ಥಿತಿ ಕುರಿತು ಚರ್ಚಿಸಲು ಸಂಪುಟ ಸಭೆ ಕರೆದ ಕೇಜ್ರಿವಾಲ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಜುಲೈ 2023, 10:25 IST
Last Updated 15 ಜುಲೈ 2023, 10:25 IST
ಅರವಿಂದ್‌ ಕೇಜ್ರಿವಾಲ್‌
ಅರವಿಂದ್‌ ಕೇಜ್ರಿವಾಲ್‌   

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಪ್ರವಾಹ ಪರಿಸ್ಥಿತಿ ಕುರಿತು ಚರ್ಚಿಸಲು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಇಂದು (ಶನಿವಾರ) ಸಂಜೆ ಸಂಪುಟ ಸಭೆಯನ್ನು ಕರೆದಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.

ಯಮುನಾ ನದಿ ನೀರಿನ ಮಟ್ಟವು ನಿಧಾನವಾಗಿ ಕಡಿಮೆಯಾಗುತ್ತಿದೆ. ಹೆಚ್ಚಿನ ಮಳೆಯಾಗದಿದ್ದರೆ ಪರಿಸ್ಥಿತಿಯೂ ಶೀಘ್ರದಲ್ಲೇ ಮೊದಲಿನ ಸ್ಥಿತಿಗೆ ಬರಲಿದೆ ಎಂದು ಕೇಜ್ರಿವಾಲ್‌ ಹೇಳಿದ್ದಾರೆ.

ಭಾರಿ ಮಳೆಯಿಂದಾಗಿ ಯಮುನಾ ನದಿ ನೀರಿನ ಮಟ್ಟವು ಹೆಚ್ಚಾಗಿ ಪ್ರವಾಹ ಸಂಭವಿಸಿ, ನಗರದ ಕೆಲವು ಭಾಗಗಳು ಜಲಾವೃತಗೊಂಡು ಜನಜೀವನ ಅಸ್ತವ್ಯಸ್ತಗೊಂಡಿತ್ತು. ಇದೀಗ ಮಳೆ ಕಡಿಮೆಯಾಗಿದ್ದು, ಇಂದು ಬೆಳಿಗ್ಗೆ ಯಮುನಾ ನೀರಿನ ಮಟ್ಟವು 207.43 ಮೀಟರ್‌ಗೆ ಇಳಿಮುಖಗೊಂಡಿದೆ. ರಾತ್ರಿ 11 ಗಂಟೆ ಸಮಯಕ್ಕೆ 206.72 ಮೀಟರ್‌ಗೆ ಇಳಿಯಲಿದೆ ಎಂದು ದೆಹಲಿ ಸರ್ಕಾರದ ಕಂದಾಯ ಕಾರ್ಯದರ್ಶಿ ಅಶ್ವಿನಿ ಕುಮಾರ್‌ ತಿಳಿಸಿದ್ದಾರೆ.

ADVERTISEMENT

ನಗರದ ಹಲವು ಭಾಗಗಳು ಇನ್ನೂ ಜಲಾವೃತಗೊಂಡಿದ್ದು, ಅಂತಹ ಪ್ರದೇಶಗಳಿಗೆ ಹೋಗದಂತೆ ಜನರಿಗೆ ಕೇಜ್ರಿವಾಲ್‌ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.