ADVERTISEMENT

ದೆಹಲಿ ಚುನಾವಣೆ ಟಿಕೆಟ್‌ಗಾಗಿ ಕೇಜ್ರಿವಾಲ್ ₹10 ಕೋಟಿಗೆ ಬೇಡಿಕೆ: ಆದರ್ಶ ಶಾಸ್ತ್ರಿ

ಏಜೆನ್ಸೀಸ್
Published 19 ಜನವರಿ 2020, 12:53 IST
Last Updated 19 ಜನವರಿ 2020, 12:53 IST
ಆದರ್ಶ ಶಾಸ್ತ್ರಿ - ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್
ಆದರ್ಶ ಶಾಸ್ತ್ರಿ - ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್   

ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆಯ ಟಿಕೆಟ್ ನೀಡಲು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ₹10 ಕೋಟಿ ಹಣಕ್ಕೆ ಬೇಡಿಕೆಯಿಟ್ಟಿದ್ದರು ಎಂದು ಎಎಪಿಯ ದ್ವಾರಕಾ ಕ್ಷೇತ್ರದ ಶಾಸಕ, ಭಾರತದ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಮೊಮ್ಮಗಆದರ್ಶ ಶಾಸ್ತ್ರಿ ಆರೋಪಿಸಿದ್ದಾರೆ.

ಶನಿವಾರವಷ್ಟೇ ಕಾಂಗ್ರೆಸ್‌ಗೆ ಸೇರ್ಪಡೆಯಾದ ಶಾಸ್ತ್ರಿ, ಆಮ್ ಆದ್ಮಿ ಪಕ್ಷ (ಎಎಪಿ)ವು 2020ರ ದೆಹಲಿ ವಿಧಾನಸಭೆ ಚುನಾವಣೆಯ ಟಿಕೆಟ್‌ಗಳನ್ನು ₹10-20 ಕೋಟಿಗಳಿಗೆ ಮಾರಾಟ ಮಾಡಿದೆ ಎಂದು ದೂರಿದ್ದಾರೆ.

ಫೆಬ್ರವರಿ 8ರಂದು ನಡೆಯಲಿರುವ ದೆಹಲಿ ವಿಧಾನಸಭೆ ಚುನಾವಣೆಗೆ ದ್ವಾರಕಾದಿಂದ ಮತ್ತೆ ಸ್ಪರ್ಧಿಸಲು ಇಚ್ಛಿಸಿದ್ದ ಶಾಸ್ತ್ರಿ ಅವರಿಗೆ ಟಿಕೆಟ್ ನೀಡಲು ಎಎಪಿ ನಿರಾಕರಿಸಿತ್ತು. ಅಲ್ಲದೆ ದ್ವಾರಕಾದಿಂದ ವಿನಯ್ ಮಿಶ್ರಾ ಅವರನ್ನು ಕಣಕ್ಕಿಳಿಸಿದ ಬೆನ್ನಲ್ಲೇ ಅಸಮಾಧಾನಗೊಂಡು ಪಕ್ಷವನ್ನು ತೊರೆದಿದ್ದರು.

ADVERTISEMENT

ಈ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ ಘಟಕದ ಅಧ್ಯಕ್ಷ ಸುಭಾಷ್ ಚೋಪ್ರಾ ಮತ್ತು ಎಐಸಿಸಿ ಉಸ್ತುವಾರಿ ಪಿ.ಸಿ.ಚಾಕೊ ಅವರ ನೇತೃತ್ವದಲ್ಲಿ ಪಕ್ಷದ ದೆಹಲಿ ಕಚೇರಿಯಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದರು.

ಆದರ್ಶಶಾಸ್ತ್ರಿ ಅವರು ಎಎಪಿಯಲ್ಲಿ ರಾಷ್ಟ್ರೀಯ ವಕ್ತಾರ ಮತ್ತು ಸಾಗರೋತ್ತರ ವ್ಯವಹಾರಗಳ ಸಹ-ಸಂಚಾಲಕರಾಗಿ ಕಾರ್ಯನಿರ್ವಹಿಸಿದ್ದರು.

ಈ ಹಿಂದೆಯೂ ಎಎಪಿ ವಿರುದ್ಧ ಇಂತದ್ದೇ ಆರೋಪ ಕೇಳಿಬಂದಿತ್ತು. ಲೋಕಸಭಾ ಚುನಾವಣೆಯಲ್ಲಿ ಎಎಪಿಯ ಪಶ್ಚಿಮ ದೆಹಲಿಯ ಅಭ್ಯರ್ಥಿಯಾಗಿದ್ದ ಬಲ್ಬೀರ್ ಸಿಂಗ್ ಜಾಖರ್ ಅವರ ಪುತ್ರ, ಟಿಕೆಟ್ ಪಡೆಯಲು ತನ್ನ ತಂದೆ ಅರವಿಂದ್‌ ಕೇಜ್ರಿವಾಲ್‌ಗೆ ಹಣ ಪಾವತಿಸಿದ್ದರು ಎಂದು ದೂರಿದ್ದರು.

ನನ್ನ ತಂದೆ ಸುಮಾರು ಮೂರು ತಿಂಗಳ ಹಿಂದೆ ರಾಜಕೀಯಕ್ಕೆ ಸೇರಿದರು. ಆಗ ಟಿಕೆಟ್‌ಗಾಗಿ ಅರವಿಂದ್ ಕೇಜ್ರಿವಾಲ್ ಅವರಿಗೆ ₹6 ​​ಕೋಟಿ ನೀಡಿದ್ದರು. ಅವರು ಹಣ ಪಾವತಿಸಿದ್ದರು ಎನ್ನುವುದಕ್ಕೆ ನನ್ನ ಬಳಿ ವಿಶ್ವಾಸಾರ್ಹ ಸಾಕ್ಷ್ಯಗಳಿವೆ ಎಂದು ಬಲ್ಬೀರ್ ಸಿಂಗ್ ಜಾಖರ್ ಪುತ್ರ ಉದಯ್ ಹೇಳಿದ್ದರು. ಪುತ್ರನ ಆರೋಪವನ್ನು ಬಲ್ಬೀರ್ ಸಿಂಗ್ ಅಲ್ಲಗಳೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.