ADVERTISEMENT

ಸರ್ಕಾರಿ ಶಾಲೆಗಳಲ್ಲಿ 'ದೇಶಭಕ್ತಿ ಪಾಠ' ಆರಂಭಿಸಿದ ಅರವಿಂದ ಕೇಜ್ರಿವಾಲ್‌

ಪಿಟಿಐ
Published 29 ಸೆಪ್ಟೆಂಬರ್ 2021, 5:36 IST
Last Updated 29 ಸೆಪ್ಟೆಂಬರ್ 2021, 5:36 IST
ಭಗತ್‌ ಸಿಂಗ್‌ ಅವರ ಜನ್ಮದಿನದ ಪ್ರಯುಕ್ತ ದೆಹಲಿಯ ಛತ್ರಸಾಲ ಸ್ಟೇಡಿಯಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ಅರವಿಂದ ಕೇಜ್ರಿವಾಲ್‌ ಸರ್ಕಾರಿ ಶಾಲೆಗಳಲ್ಲಿ 'ದೇಶಭಕ್ತಿ ಪಾಠ'ಕ್ಕೆ ಚಾಲನೆ ನೀಡಿದರು.
ಭಗತ್‌ ಸಿಂಗ್‌ ಅವರ ಜನ್ಮದಿನದ ಪ್ರಯುಕ್ತ ದೆಹಲಿಯ ಛತ್ರಸಾಲ ಸ್ಟೇಡಿಯಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ಅರವಿಂದ ಕೇಜ್ರಿವಾಲ್‌ ಸರ್ಕಾರಿ ಶಾಲೆಗಳಲ್ಲಿ 'ದೇಶಭಕ್ತಿ ಪಾಠ'ಕ್ಕೆ ಚಾಲನೆ ನೀಡಿದರು.   

ನವದೆಹಲಿ: ದೆಹಲಿಯ ಪ್ರತಿಯೊಂದು ಮಗುವು ನಿಜವಾದ ಅರ್ಥದಲ್ಲಿ ದೇಶಭಕ್ತನಾಗಬೇಕು ಎಂಬ ಸದುದ್ದೇಶದೊಂದಿಗೆ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ಸರ್ಕಾರಿ ಶಾಲೆಗಳಲ್ಲಿ 'ದೇಶಭಕ್ತಿ ಪಾಠ'ವನ್ನು ಆರಂಭಿಸಿದ್ದಾರೆ.

ಸ್ವಾತಂತ್ರ್ಯ ಹೋರಾಟಗಾರ ಭಗತ್‌ ಸಿಂಗ್‌ ಅವರ ಜನ್ಮದಿನದ ಪ್ರಯುಕ್ತ ದೆಹಲಿಯ ಛತ್ರಸಾಲ ಸ್ಟೇಡಿಯಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ದೇಶಭಕ್ತಿ ಪಾಠಕ್ಕೆ ಸಿಎಂ ಮುನ್ನಡಿ ಇಟ್ಟಿದ್ದಾರೆ.

'ಇಂದು ತ್ರಿವರ್ಣ ಧ್ವಜವನ್ನು ಎತ್ತಿ ಹಿಡಿಯುವುದು ಅಥವಾ ರಾಷ್ಟ್ರಗೀತೆಯನ್ನು ಹಾಡುವುದು ದೇಶಭಕ್ತಿ ಎಂದಾಗಿದೆ. ಆದರೆ ದೇಶಭಕ್ತಿ ಎಂಬುದು ಎಲ್ಲರಲ್ಲೂ ನಿರಂತರವಾಗಿ ಅರಳುವ ಭಾವನೆಯಾಗಬೇಕು' ಎಂದು ಕೇಜ್ರಿವಾಲ್‌ ಹೇಳಿದರು.

ADVERTISEMENT

'ಕಳೆದ 74 ವರ್ಷಗಳಲ್ಲಿ, ಭೌತಶಾಸ್ತ್ರ, ರಸಾಯನ ಶಾಸ್ತ್ರ ಮತ್ತು ಗಣಿತ ಇವುಗಳನ್ನೆಲ್ಲ ಶಾಲೆಯಲ್ಲಿ ಕಲಿತಿದ್ದೇವೆ. ಆದರೆ ಮಕ್ಕಳಿಗೆ ದೇಶಭಕ್ತಿಯನ್ನು ಹೇಳಿಕೊಟ್ಟಿಲ್ಲ. ದೇಶಭಕ್ತಿ ಎಂಬುದು ನಮ್ಮೊಳಗೇ ಇದೆ. ಆದರೆ ಅದನ್ನು ಮುನ್ನೆಲೆಗೆ ತರಿಸಬೇಕು. ದೆಹಲಿಯ ಪ್ರತಿಯೊಂದು ಮಗುವು ನಿಜವಾದ ಅರ್ಥದಲ್ಲಿ ದೇಶಭಕ್ತನಾಗಬೇಕು. ದೇಶಭಕ್ತಿ ಪಾಠವು ತೀವ್ರಗತಿಯಲ್ಲಿ ರಾಷ್ಟ್ರದ ಅಭಿವೃದ್ಧಿ ಮತ್ತು ರಾಷ್ಟ್ರವನ್ನು ಮುನ್ನಡೆಸಲು ಸಾಧ್ಯ' ಎಂದು ಕೇಜ್ರಿವಾಲ್‌ ತಿಳಿಸಿದರು.

ದೇಶಭಕ್ತಿ ಪಾಠದ ಮೂಲಕ ದೇಶಭಕ್ತ ವೈದ್ಯರು, ವಕೀಲರು, ಇಂಜಿನಿಯರ್‌ಗಳು, ನಟರು, ಗಾಯಕರು, ಕಲಾವಿದರು, ಪತ್ರಕರ್ತರು ಹೀಗೆ ಮುಂತಾದ ವೃತ್ತಿನಿರತರನ್ನು ಸೃಷ್ಟಿಸುತ್ತೇವೆ. ಒಬ್ಬ ದೇಶಭಕ್ತ ವೈದ್ಯ ಹೆಚ್ಚು ಶುಲ್ಕವನ್ನಷ್ಟೇ ಪಡೆಯುವುದಿಲ್ಲ, ಹೆಚ್ಚು ಜನರ ಸೇವೆ ಮಾಡುತ್ತಾನೆ. ದೇಶಭಕ್ತರು ತಮ್ಮ ವೃತ್ತಿಯಲ್ಲೇ ಹೆಚ್ಚು ಸೇವೆಯನ್ನು ನೀಡುವ ಮೂಲಕ ರಾಷ್ಟ್ರದ ಅಭಿವೃದ್ಧಿಗೆ ಕೊಡುಗೆ ನೀಡುತ್ತಾನೆ ಎಂದು ಕೇಜ್ರಿವಾಲ್‌ ವಿವರಿಸಿದರು.

ದೇಶಭಕ್ತಿ ಪಾಠವನ್ನು 12ನೇ ತರಗತಿ ವರೆಗೆ ವಿದ್ಯಾರ್ಥಿಗಳಿಗೆ ಬೋಧಿಸಲಾಗುತ್ತದೆ. ಈ ವಿಷಯವಾಗಿ ಪ್ರತ್ಯೇಕ ಪಠ್ಯ ಪುಸ್ತಕವಿಲ್ಲ. ಶಿಶು ವಿಹಾರದಿಂದ 5ನೇ ತರಗತಿ ವರೆಗೆ, 6ರಿಂದ 8ನೇ ತರಗತಿ ವರೆಗೆ ಮತ್ತು 9ರಿಂದ 12ನೇ ತರಗತಿ ವರೆಗೆ 3 ವಿಭಾಗಗಳನ್ನು ಮಾಡಲಾಗಿದ್ದು, ಬೋಧನೆಗೆ ಸುಲಭವಾಗಿಸುವ ನಿಟ್ಟಿನಲ್ಲಿ ಎರಡು ಕೈಪಿಡಿಗಳಿರಲಿವೆ. ಸ್ವಾತಂತ್ರ್ಯ ಹೋರಾಟಗಾರರು ಮತ್ತು ದೇಶಭಕ್ತರ 100 ಕತೆಗಳು ಇದರಲ್ಲಿರಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.