ADVERTISEMENT

ಕರಗುತ್ತಿರುವ ಹಿಮನದಿಗಳು; ನೀರಿನ ಕೊರತೆ, ಕೃಷಿ ಉತ್ಪಾದನೆ ಕುಸಿವ ಸಾಧ್ಯತೆ

ಕಾಶ್ಮೀರ ವಿಶ್ವವಿದ್ಯಾಲಯದ ತಜ್ಞರ ಅಧ್ಯಯನ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2020, 9:09 IST
Last Updated 6 ಸೆಪ್ಟೆಂಬರ್ 2020, 9:09 IST
ಹಿಮನದಿ (ಗ್ಲೇಸಿಯರ್)– ಸಾಂದರ್ಭಿಕ ಚಿತ್ರ
ಹಿಮನದಿ (ಗ್ಲೇಸಿಯರ್)– ಸಾಂದರ್ಭಿಕ ಚಿತ್ರ   

ಶ್ರೀನಗರ: ಕಳೆದ ಆರು ದಶಕಗಳಲ್ಲಿ ಕಾಶ್ಮೀರದಲ್ಲಿರುವ ಹಿಮನದಿಗಳು ವೇಗವಾಗಿ ಕರಗುತ್ತಿದ್ದು, ಶೇ 23ರಷ್ಟು ಹಿಮಪ್ರದೇಶ ನಾಶವಾಗಿರುವ ಕಾರಣ, ಭವಿಷ್ಯದಲ್ಲಿ ಕಣಿವೆ ರಾಜ್ಯದಲ್ಲಿ ನೀರಿನ ಕೊರತೆ ಎದುರಾಗುವ ಜತೆಗೆ, ಕೃಷಿ ಉತ್ಪಾದನೆಯೂ ಕುಸಿಯುವ ಸಾಧ್ಯತೆ ಇದೆ ಎಂದು ಅಧ್ಯಯನವೊಂದು ತಿಳಿಸಿದೆ.

ಕಾಶ್ಮೀರವು ಭಾರತದ ಉಪಖಂಡದಲ್ಲೇ ಅತಿ ಹೆಚ್ಚು ಹಿಮನದಿಗಳನ್ನು ಹೊಂದಿದೆ. ಈ ನದಿಗಳಿಂದ ಉತ್ತರ ಭಾರತದ ಅನೇಕ ಪ್ರಮುಖ ನದಿಗಳಿಗೆ ನೀರು ಪೂರೈಕೆಯಾಗುತ್ತದೆ. ವಾತಾವರಣದಲ್ಲಿ ದಿಢೀರನೆ ತಾಪಮಾನ ಏರಿಳಿತ ಉಂಟಾಗುತ್ತಿರುವ ಕಾರಣ, ಹಿಮನದಿಗಳೂ ಬತ್ತಿ ಹೋಗುತ್ತಿವೆ. ಇದರಿಂದ ನದಿಗಳಲ್ಲಿ ನೀರಿನ ಕೊರತೆ ಉಂಟಾಗಲಿದ್ದು, ಕೃಷಿ ಕ್ಷೇತ್ರದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಅಧ್ಯಯನದಲ್ಲಿ ಉಲ್ಲೇಖಿಸಲಾಗಿದೆ.

ವಿಶ್ವವಿದ್ಯಾಲಯದ ಜಿಯೋ ಇನ್ಫಾರ್ಮ್ಯಾಟಿಕ್ಸ್ ವಿಭಾಗದ ಪ್ರಾಧ್ಯಾಪಕ ಶಕೀಲ್ ರೊಮ್‌ಶೂ ಮತ್ತು ತಂಡ ನಡೆಸಿದ ಈ ಅಧ್ಯಯನ ಪ್ರಬಂಧ ಬ್ರಿಟನ್ ಮೂಲದ ‘ನೇಚರ್ ರಿಸರ್ಚ್‘ ಪತ್ರಿಕೆಯಲ್ಲಿ ಪ್ರಕಟಿಸಲಾಗಿದೆ.‌

ADVERTISEMENT

ತಜ್ಞರು 2000 ದಿಂದ 2012ರವರೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿರುವ ಎಲ್ಲಾ 12243 ಹಿಮನದಿಗಳನ್ನು ಅಧ್ಯಯನ ಮಾಡಿದ್ದಾರೆ. ಈ ಅಧ್ಯಯನದಲ್ಲಿ ಹಿಮನದಿಗಳಿಂದ ಕರಗಿದ ಹಿಮದ ಒಟ್ಟು ಪ್ರಮಾಣವನ್ನು ಲೆಕ್ಕಹಾಕಿದೆ. ಆ ಪ್ರಕಾರ, ಜಮ್ಮು ಮತ್ತು ಕಾಶ್ಮೀರದಲ್ಲಿರುವ ಹಿಮನದಿಗಳಲ್ಲಿ ಒಂದು ದಶಕದಲ್ಲಿ 7 ಕೋಟಿ ಟನ್‌ನಷ್ಟು(70 ಗಿಗಾ ಟನ್‌) ಹಿಮದ ಪ್ರಮಾಣ ಕಡಿಮೆಯಾಗಿದೆ. ಇದು ಪರಿಸರದ ಮೇಲೆ ತೀವ್ರ ಪರಿಣಾಮ ಬೀರಲಿದೆ ಎಂದು ವಿಜ್ಞಾನಿಗಳು ಅತಂಕ ವ್ಯಕ್ತಪಡಿಸಿದ್ದಾರೆ.

ಈ ಅಧ್ಯಯನಕ್ಕಾಗಿ ಉಪಗ್ರಹ ಚಿತ್ರಗಳು ಸೇರಿದಂತೆ ಹಲವು ದತ್ತಾಂಶಗಳನ್ನು ಬಳಸಿಕೊಂಡಿದ್ದೇವೆ.ಜಿಐಎಸ್‌(ಜಿಯಾಗ್ರಫ್ರಿಕಲ್ ಇಂಡಿಕೇಟರ್‌ ಸಿಸ್ಟಮ್‌) ಸೇರಿದಂತೆ ಹಲವು ಸಂಶೋಧನಾ ಸಾಧನಗಳನ್ನು ಉಪಯೋಗಿಸಿದ್ದೇವೆ. ಜತೆಗೆ ಅಮೆರಿಕ ಮೂಲದ ಉಪಗ್ರಹಗಳು ಮತ್ತು ಜರ್ಮನ್ ಏರೋಸ್ಪೇಸ್ ಉಪಗ್ರಹಗಳ ಡೇಟಾವನ್ನು ಬಳಸಿರುವುದಾಗಿ ಅಬ್ದುಲ್ಲಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.