ಲಖನೌ: ‘ಕೃಷ್ಣ ಜನ್ಮಭೂಮಿ ಜಾಗದಲ್ಲಿದ್ದ ಹಿಂದೂ ದೇವಸ್ಥಾನವನ್ನು ಮೊಘಲರ ದೊರೆ ಔರಂಗಜೇಬ ಧ್ವಂಸಗೊಳಿಸಿದ್ದ ಮತ್ತು ಆ ಸ್ಥಳದಲ್ಲಿ ಮಸೀದಿ ನಿರ್ಮಿಸಲಾಗಿದೆ’ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್ಐ) ತಿಳಿಸಿದೆ.
ಉತ್ತರ ಪ್ರದೇಶದ ಮೈನ್ಪುರಿ ಜಿಲ್ಲೆಯ ಅಜಯ್ ಕುಮಾರ್ ಎಂಬುವವರು ಮಾಹಿತಿ ಹಕ್ಕು ಕಾಯ್ದೆ (ಆರ್ಟಿಐ) ಅಡಿ ಸಲ್ಲಿಸಿದ್ದ ಅರ್ಜಿಗೆ ನೀಡಿರುವ ಉತ್ತರದಲ್ಲಿ ಎಎಸ್ಐ, ಈ ಮಾಹಿತಿ ಒದಗಿಸಿದೆ.
ಎಎಸ್ಐ ನೀಡಿರುವ ಈ ಮಾಹಿತಿಯು, ಶ್ರೀಕೃಷ್ಣ ಜನ್ಮಭೂಮಿ–ಶಾಹಿ ಈದ್ಗಾ ಮಸೀದಿ ಪ್ರಕರಣದಲ್ಲಿ ಪ್ರಮುಖ ಸಾಕ್ಷ್ಯವಾಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.
ಬ್ರಿಟಿಷ್ ಆಳ್ವಿಕೆ ವೇಳೆ, 1920ರಲ್ಲಿ ಹೊರಡಿಸಿದ್ದ ಗೆಜೆಟ್ ಅಧಿಸೂಚನೆಯನ್ನು ಎಎಎಸ್ಐ ತಾನು ನೀಡಿದ ಉತ್ತರದಲ್ಲಿ ಉಲ್ಲೇಖಿಸಿದೆ. ‘ಮಸೀದಿಯೊಂದನ್ನು ನಿರ್ಮಿಸುವುದಕ್ಕಾಗಿ ಶ್ರೀಕೃಷ್ಣ ಜನ್ಮಭೂಮಿ ದೇವಸ್ಥಾನ ಸಂಕೀರ್ಣದ ಭಾಗವಾಗಿತ್ತು ಎನ್ನಲಾದ ಕೇಶವದೇವ ದೇವಸ್ಥಾನವನ್ನು ಧ್ವಂಸಗೊಳಿಸಲಾಗಿತ್ತು’ ಎಂದು ತಿಳಿಸಿದೆ.
ಹೈಕೋರ್ಟ್ಗೆ ಸಲ್ಲಿಕೆ: ‘ಶ್ರೀಕೃಷ್ಣ ಜನ್ಮಭೂಮಿ–ಶಾಹಿ ಈದ್ಗಾ ಮಸೀದಿ ಪ್ರಕರಣದ ವಿಚಾರಣೆ ಅಲಹಾಬಾದ್ ಹೈಕೋರ್ಟ್ನಲ್ಲಿ ಫೆ.22ರಂದು ನಡೆಯಲಿದೆ. ಅಜಯ್ ಕುಮಾರ್ ಅವರಿಗೆ ಎಎಸ್ಐ ನೀಡಿರುವ ಈ ಉತ್ತರವನ್ನು ಸಾಕ್ಷ್ಯವಾಗಿ ಹೈಕೋರ್ಟ್ಗೆ ಸಲ್ಲಿಸಲಾಗುವುದು’ ಎಂದು ಈ ಪ್ರಕರಣದಲ್ಲಿ ಹಿಂದೂ ಅರ್ಜಿದಾರರ ಪರ ವಕೀಲರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.