
ನವದೆಹಲಿ: ಮುಸ್ಲಿಮರ ವಿರುದ್ಧದ ದ್ವೇಷ ಬಿಂಬಿಸುವ ವಿಡಿಯೊ ಅನ್ನು ಅಸ್ಸಾಂ ಬಿಜೆಪಿ ಘಟಕ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವುದಕ್ಕೆ ವಿರೋಧ ಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.
ವಿರೋಧ ಪಕ್ಷಗಳ ನಾಯಕರ ಟೀಕೆ ಬಳಿಕ, ’ಎಕ್ಸ್‘ನಿಂದ ವಿಡಿಯೊ ಅನ್ನು ಬಿಜೆಪಿ ತೆಗೆದು ಹಾಕಿತು.
ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಅವರು ಅಲ್ಪಸಂಖ್ಯಾತ ಸಮುದಾಯದವರನ್ನು ಬಿಂಬಿಸುವ ಇಬ್ಬರು ವ್ಯಕ್ತಿಗಳ ಮೇಲೆ ಸಾಂಕೇತಿಕವಾಗಿ ಗುಂಡು ಹಾರಿಸುತ್ತಿರುವ ವಿಡಿಯೊಕ್ಕೆ ಕಾಂಗ್ರೆಸ್, ಟಿಎಂಸಿ ಸೇರಿದಂತೆ ವಿವಿಧ ವಿರೋಧ ಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.
‘ಈ ವೀಡಿಯೊ ನರಮೇಧಕ್ಕೆ ಕರೆ ನೀಡುವುದಲ್ಲದೆ ಬೇರೇನೂ ಅಲ್ಲ’ ಎಂದು ಆರೋಪಿಸಿರುವ ವಿರೋಧ ಪಕ್ಷಗಳು, ಇದು ಮುಸ್ಲಿಮರ ವಿರುದ್ಧದ ದ್ವೇಷ ಅಭಿಯಾನವಾಗಿದೆ. ಈ ಕೃತ್ಯದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿವೆ.
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ರೈಫಲ್ ಹಿಡಿದು ಅಲ್ಪಸಂಖ್ಯಾತ ಸಮುದಾಯದ ಇಬ್ಬರು ವ್ಯಕ್ತಿಗಳ ಮೇಲೆ ಸಾಂಕೇತಿಕವಾಗಿ ಗುಂಡು ಹಾರಿಸುತ್ತಿರುವ ದೃಶ್ಯವನ್ನು ‘ಪಾಯಿಂಟ್-ಬ್ಲಾಂಕ್ ಶಾಟ್’ ಎಂಬ ಶೀರ್ಷಿಕೆಯೊಂದಿಕಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಲಾಗಿತ್ತು. ಈ ವಿಡಿಯೊ ಕುರಿತು ಆಕ್ರೋಶ ಭುಗಿಲೆದ್ದ ಕಾರಣ, ಅಸ್ಸಾಂ ಬಿಜೆಪಿ ಘಟಕವು ಆ ಪೋಸ್ಟ್ ಅನ್ನು ತೆಗೆದುಹಾಕಿದೆ.
‘ಇದು ತೀವ್ರ ಅಸಹ್ಯಕರ ಹಾಗೂ ಮನಸ್ಸನ್ನು ಕದಲುವಂತಹದ್ದು. ಇದನ್ನು ಯಾವುದೋ ಟ್ರೋಲ್ ವಿಷಯವೆಂದು ನಿರ್ಲಕ್ಷ್ಯಿಸುವಂತಿಲ್ಲ’ ಎಂದು ಕಾಂಗ್ರೆಸ್ ತನ್ನ ಅಧಿಕೃತ ‘ಎಕ್ಸ್’ ಖಾತೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದೆ. ‘ಇದು ಸಾಮೂಹಿಕ ಹಿಂಸಾಚಾರ ಮತ್ತು ನರಮೇಧಕ್ಕೆ ಕರೆ ನೀಡುತ್ತದೆ. ಈ ಫ್ಯಾಸಿಸ್ಟ್ ಆಡಳಿತದ ನೈಜ ಮುಖದ ಪ್ರತಿಬಿಂಬವಾಗಿದೆ’ ಎಂದು ಟೀಕಿಸಿದೆ.
‘ಈ ಪ್ರಕರಣದಲ್ಲಿ ಯಾವುದೇ ಔದಾರ್ಯ ತೋರಿಸಬಾರದು’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಆಗ್ರಹಿಸಿದ್ದಾರೆ. ಈ ಕುರಿತು ಎಕ್ಸ್ ಮಾಡಿರುವ ಅವರು, ‘ಪ್ರಧಾನಿ ನರೇಂದ್ರ ಮೋದಿ ಇದನ್ನು ಖಂಡಿಸುತ್ತಾರೆ ಅಥವಾ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತಾರೆ ಎಂಬ ಯಾವುದೇ ಭರವಸೆ ಇಲ್ಲದಿರುವುದರಿಂದ, ನ್ಯಾಯಾಂಗವು, ಈ ಕೃತ್ಯದ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ‘ಇದು ಸಾಮಾನ್ಯ ಟ್ರೋಲ್ ವಿಷಯವಾಗಿ ನಿರ್ಲಕ್ಷ್ಯಿಸುವ ವಿಡಿಯೊವಲ್ಲ’ ಎಂದು ಅವರು ವಿವರಿಸಿದ್ದಾರೆ.
ತೃಣಮೂಲ ಕಾಂಗ್ರೆಸ್ ರಾಜ್ಯಸಭಾ ಉಪನಾಯಕಿ ಸಾಗರಿಕಾ ಘೋಷ್, ‘ಅಸ್ಸಾಂ ಬಿಜೆಪಿ ಘಟಕ ಯುಎಪಿಎ ಅಪರಾಧ ಎಸಗಿದೆ ಮತ್ತು ಹಿಂಸಾಚಾರಕ್ಕೆ ಸ್ಪಷ್ಟ ಪ್ರಚೋದನೆ ನೀಡಿರುವ ಆರೋಪ ಹೊತ್ತಿದೆ. ಈಗ ವಿಡಿಯೊ ಅಳಿಸುವ ಮೂಲಕ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಭಾರತೀಯ ನ್ಯಾಯ ಸಂಹಿತೆ 152, 156 ಮತ್ತು 192 ಅಡಿ, ಈ ಪ್ರಕರಣದಲ್ಲಿ ಅವರಿಗೆ ಶಿಕ್ಷೆಯನ್ನು ನೀಡಬೇಕು’ ಎಂದು ಅವರು ‘ಎಕ್ಸ್’ನಲ್ಲಿ ಆಗ್ರಹಿಸಿದ್ದಾರೆ.
ಶಿವಸೇನೆ (ಯುಬಿಟಿ) ರಾಜ್ಯಸಭಾ ಉಪನಾಯಕಿ ಪ್ರಿಯಾಂಕಾ ಚತುರ್ವೇದಿ, ‘ಬಿಜೆಪಿಯ ‘ಪಾಯಿಂಟ್ ಬ್ಲಾಂಕ್ ಶಾಟ್’ ಪೋಸ್ಟ್ ಅತ್ಯಂತ ದ್ವೇಷಪೂರಿತ ವಿಡಿಯೊವಾಗಿದೆ. ಜನಾಕ್ರೋಶದ ನಂತರ ಪೋಸ್ಟ್ ಅಳಿಸಿಹಾಕಲಾಗಿದೆ’ ಎಂದು ದೂರಿದ್ದಾರೆ.
‘ಇದು ಜನಾಂಗವೊಂದನ್ನು ನಾಶಪಡಿಸುವ ಮತ್ತು ನರಮೇಧಕ್ಕೆ ಮುಕ್ತ ಕರೆಯಾಗಿದೆ. ಮುಂದೆ ಅಸ್ಸಾಂನಲ್ಲಿ ದುರಂತ ಸಂಭವಿಸುವ ಮೊದಲು ಮುಖ್ಯಮಂತ್ರಿ ಶರ್ಮಾ ಅವರನ್ನು ಜೈಲಿಗೆ ಹಾಕಬೇಕು’ ಎಂದು ಸಿಪಿಐ(ಎಂ) ಒತ್ತಾಯಿಸಿದೆ.
‘ಕೋಮು ಸಾಮರಸ್ಯವನ್ನು ಕೆಡಿಸಿದ್ದಕ್ಕಾಗಿ, ಸಮುದಾಯಗಳ ನಡುವೆ ದ್ವೇಷ ಸೃಷ್ಟಿಸಿದ್ದಕ್ಕಾಗಿ ಮತ್ತು ಸಾರ್ವಜನಿಕವಾಗಿ ಹಿಂಸಾಚಾರಕ್ಕೆ ಕರೆ ನೀಡಿದ್ದಕ್ಕಾಗಿ ಶರ್ಮ ಮತ್ತು ಅವರ ಗುಂಪಿನ ವಿರುದ್ಧ ಸುಪ್ರೀಂ ಕೋರ್ಟ್ ತಕ್ಷಣವೇ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಎಕ್ಸ್ನಲ್ಲಿ ಒತ್ತಾಯಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.