ಗುವಾಹಟಿ: ನೈಸರ್ಗಿಕ ಅನಿಲ ಬಾವಿಯಲ್ಲಿನ ಬೆಂಕಿ ನಂದಿಸುವ ಕಾರ್ಯದಲ್ಲಿ ಆಯಿಲ್ ಇಂಡಿಯಾ ಲಿಮಿಟೆಡ್ನ (ಒಐಎಲ್) ಅಗ್ನಿಶಾಮಕ ಸಿಬ್ಬಂದಿ ನಿರತರಾಗಿದ್ದು ಕಾರ್ಯಾಚರಣೆ ಮುಂದುವರೆದಿದೆ.
ಅಸ್ಸಾಂನ ಟಿನ್ಸುಕಿಯಾ ಜಿಲ್ಲೆಯ ಬಾಗ್ಜನ್ ತೈಲ ಕ್ಷೇತ್ರದ ಅನಿಲ ಬಾವಿಯಲ್ಲಿ 20 ದಿನಗಳಿಂದ ಅನಿಲ ಸೋರಿಕೆ ಆಗುತ್ತಿದ್ದು ಪದೇ ಪದೇ ಬೆಂಕಿ ಕಾಣಿಸಿಕೊಳ್ಳುತ್ತಿದೆ.ಕಳೆದ ವಾರ ಅಗ್ನಿ ಶಮನ ಕಾರ್ಯದಲ್ಲಿದ್ದ ಇಬ್ಬರು ಸಿಬ್ಬಂದಿ ಬೆಂಕಿಗೆ ಆಹುತಿಯಾಗಿದ್ದರು.
ರಾಷ್ಟ್ರೀಯ ವಿಪತ್ತುನಿರ್ವಹಣಾ ಪಡೆ (ಎನ್ಡಿಆರ್ಎಫ್) ತಂಡದ ಮುಖ್ಯಸ್ಥರ ಜೊತೆ ಪ್ರಧಾನಿ ನರೇಂದ್ರ ಮೋದಿ ಪರಿಸ್ಥಿತಿಯ ಬಗ್ಗೆಗುರುವಾರ ಸಮಾಲೋಚನೆ ನಡೆಸಿದ್ದರು.
ರಾಜ್ಯ ಸರ್ಕಾರದ ಮನವಿ ಮೇರೆಗೆ ಬೆಂಕಿ ನಂದಿಸುವ ಕಾರ್ಯದಲ್ಲಿ ಭಾರತೀಯ ವಾಯು ಪಡೆ, ಸೇನೆ ಕೈಜೋಡಿಸಿವೆ. ಪ್ಯಾರಾಮಿಲಿಟರಿ ಪಡೆಗಳು ಪ್ರದೇಶ ಸುತ್ತವರಿದಿವೆ. ಬೆಂಕಿಯಿಂದ ಎತ್ತರದವರೆಗೂ ಜ್ವಾಲೆ ವ್ಯಾಪಿಸಿದ್ದು, ಸುಮಾರು 10 ಕಿ.ಮೀ. ದೂರದಿಂದಲೂ ಅದನ್ನು ಕಾಣಬಹುದಾಗಿದೆ.
ಮೂಲಗಳ ಪ್ರಕಾರ, ಪೂರ್ಣ ಸೋರಿಕೆ ನಿಯಂತ್ರಿಸಲುತಜ್ಞರು ನಾಲ್ಕು ವಾರಗಳು ತೆಗೆದುಕೊಳ್ಳಲಿದ್ದಾರೆ.
ತೈಲ ಬಾವಿಯ ಸಮೀಪದ ಭತ್ತದ ಗದ್ದೆಗಳು, ಕೊಳಗಳು ಕಲುಷಿತಗೊಂಡಿವೆ. ಚಹಾ ತೋಟಗಳಲ್ಲಿ ಸಹ ಅನಿಲದ ಕಣಗಳು ವ್ಯಾಪಿಸಿವೆ ಎಂದು ಬೆಳೆಗಾರರು ದೂರಿದ್ದಾರೆ. ಈ ಪ್ರದೇಶದಲ್ಲಿ ಆತಂಕ ಮನೆ ಮಾಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.