ADVERTISEMENT

ಮಿಜೋರಾಂ ಸಂಸದರ ವಿರುದ್ಧದ ಎಫ್‌ಐಆರ್ ಹಿಂಪಡೆಯಿರಿ: ಅಸ್ಸಾಂ ಸಿಎಂ ಸೂಚನೆ

ಪಿಟಿಐ
Published 2 ಆಗಸ್ಟ್ 2021, 9:35 IST
Last Updated 2 ಆಗಸ್ಟ್ 2021, 9:35 IST
ಹಿಮಂತ ಬಿಸ್ವಾ ಶರ್ಮಾ
ಹಿಮಂತ ಬಿಸ್ವಾ ಶರ್ಮಾ   

ಗುವಾಹಟಿ: ಅಂತರರಾಜ್ಯ ಗಡಿ ವಿವಾದದ ನಡುವೆಯೇ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಮಿಜೋರಾಂ ಸಂಸದ ಕೆ.ವನ್ಲವೇಣ್‌ ವಿರುದ್ಧ ದಾಖಲಿಸಿದ್ದ ಎಫ್‌ಐಆರ್‌ ಅನ್ನು ಹಿಂದಕ್ಕೆ ತೆಗೆದುಕೊಳ್ಳುವಂತೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಸೋಮವಾರ ಪೊಲೀಸರಿಗೆ ಆದೇಶಿಸಿದ್ದಾರೆ.

ಆದರೆ, ಕಾಚಾರ್ ಜಿಲ್ಲೆಯ ಲೈಲಾಪುರದಲ್ಲಿ ಅಂತಾರಾಜ್ಯ ಗಡಿ ವಿವಾದದ ವೇಳೆ ನಡೆದ ಗುಂಡಿನ ಕಾಳಗದಲ್ಲಿ ಆರು ಮಿಜೋರಾಂ ಸರ್ಕಾರಿ ಅಧಿಕಾರಿಗಳ ವಿರುದ್ಧ ದಾಖಲಾಗಿರುವ ಪೊಲೀಸ್ ಪ್ರಕರಣಗಳ ತನಿಖೆ ಮುಂದುವರಿಸಲಾಗುವುದು ಎಂದು ಶರ್ಮಾ ಹೇಳಿದರು. ಈ ಘಟನೆಯಲ್ಲಿ ಮಿಜೋರಾಂನ ಆರು ಅಧಿಕಾರಿಗಳು ಮತ್ತು ಸಂಸದರ ವಿರುದ್ಧ ಅಸ್ಸಾಂ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಈ ಕುರಿತು ಸರಣಿ ಟ್ವೀಟ್‌ ಮಾಡಿರುವ ಅಸ್ಸಾಂ ಮುಖ್ಯಮಂತ್ರಿ ಶರ್ಮಾ, ಈಶಾನ್ಯ ರಾಜ್ಯಗಳ ನಡುವೆ ಉದ್ಭವಿಸಿರುವ ವಿವಾದವನ್ನು ಬಗೆಹರಿಸಲು ಮಿಜೋರಾಂ ಮುಖ್ಯಮಂತ್ರಿ ಝೋರಮ್‌ತಂಗಾ ಅವರ ಪ್ರಯತ್ನವನ್ನು ಶ್ಲಾಘಿಸಿದ್ದಾರೆ.

ADVERTISEMENT

‘ನಾನು ಮಾಧ್ಯಮಗಳಲ್ಲಿ ಮಿಜೋರಾಂ ಮುಖ್ಯಮಂತ್ರಿ ಝೋರಮ್‌ತಂಗಾ ಅವರ ಹೇಳಿಕೆಗಳನ್ನು ಗಮನಿಸಿದ್ದೇನೆ. ಅವರು ಗಡಿ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಅಸ್ಸಾಂ ಯಾವಾಗಲೂ ಈಶಾನ್ಯ ರಾಜ್ಯಗಳ ಉತ್ಸಾಹವನ್ನು ಪ್ರೋತ್ಸಾಹಿಸುತ್ತದೆ‘ ಎಂದು ಶರ್ಮಾ ಹೇಳಿದ್ದಾರೆ. ಅಸ್ಸಾಂ ತನ್ನ ಗಡಿಗಳಲ್ಲಿ ಶಾಂತಿ ಕಾಪಾಡಲು ಬದ್ಧವಾಗಿದೆ ಎಂದು ಅವರು ಹೇಳಿದರು.

‘ಉಭಯ ರಾಜ್ಯಗಳ ನಡುವಿರುವ ಇದೇ ಸೌಹಾರ್ದ ವಾತಾವರಣವನ್ನು ಮುಂದುವರಿಸುವ ಇಚ್ಛೆಯಿಂದ ನಾನು ಅಸ್ಸಾಂ ಪೊಲೀಸರಿಗೆ ಮಿಜೋರಾಂ ಸಂಸದ ಕೆ.ವನ್ಲವೇಣ್‌ ಅವರ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಅನ್ನು ಹಿಂದಕ್ಕೆ ಪಡೆಯಲು ತಿಳಿಸಿದ್ದೇನೆ. ಆದರೂ, ಮಿಜೋರಾಂ ಪೊಲೀಸ್ ಅಧಿಕಾರಿಗಳ ವಿರುದ್ಧದ ದಾಖಲಾಗಿರುವ ಪ್ರಕರಣಗಳ ತನಿಖೆಯನ್ನು ಮುಂದುವರಿಸಲಾಗುತ್ತದೆ‘ ಎಂದು ಶರ್ಮಾ ಟ್ವೀಟ್‌ನಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.