ADVERTISEMENT

ನಾನು ಹೆಲಿಕಾಪ್ಟರ್‌ನಲ್ಲಿ ಫೋಟೊ ಸೆಷನ್‌ಗೆ ಹೋಗಿಲ್ಲ: ಉದ್ಧವ್ ಠಾಕ್ರೆ

ಪ್ರಧಾನಿ ಮೋದಿ ಅವರನ್ನು ಕುಟುಕಿದ ಮಹಾರಾಷ್ಟ್ರ ಸಿ.ಎಂ

ಪಿಟಿಐ
Published 22 ಮೇ 2021, 15:20 IST
Last Updated 22 ಮೇ 2021, 15:20 IST
ಉದ್ಧವ್ ಠಾಕ್ರೆ
ಉದ್ಧವ್ ಠಾಕ್ರೆ   

ಮುಂಬೈ: ಮಹಾರಾಷ್ಟ್ರದ ಚಂಡಮಾರುತ ಪೀಡಿತ ಕೊಂಕಣ ಪ್ರದೇಶಕ್ಕೆ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಭೇಟಿ ನೀಡಿದ ಕುರಿತು ಬಿಜೆಪಿ ಟೀಕಿಸಿದ್ದು, ಇದಕ್ಕೆ ಪ್ರತಿಯಾಗಿ ಉದ್ಧವ್ ಅವರು ‘ನಾನೇನು ಹೆಲಿಕಾಪ್ಟರ್‌ನಲ್ಲಿ ಫೋಟೊ ಸೆಷನ್‌ಗೆ ಹೋಗಿಲ್ಲ. ನಾನೂ ಒಬ್ಬ ಫೋಟೊಗ್ರಾಫರ್’ ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಪರೋಕ್ಷವಾಗಿ ಕುಟುಕಿದ್ದಾರೆ.

ಇತ್ತೀಚೆಗಷ್ಟೇ ಪ್ರಧಾನಿ ಮೋದಿ ಗುಜರಾತ್‌ನ ‘ತೌತೆ’ ಚಂಡಮಾರುತದ ನೆರೆಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದ್ದನ್ನು ಗುರಿಯಾಗಿಸಿಕೊಂಡು ಉದ್ಧವ್ ಈ ಹೇಳಿಕೆ ನೀಡಿದ್ದಾರೆ.

ಉದ್ಧವ್ ಅವರು ಶುಕ್ರವಾರ ಕೊಂಕಣ ಪ್ರದೇಶದ ರತ್ನಗಿರಿ ಮತ್ತು ಸಿಂಧುದುರ್ಗ ಜಿಲ್ಲೆಗಳ ನೆರೆಪೀಡಿತ ಪ್ರದೇಶಗಳ ಸಮೀಕ್ಷೆ ನಡೆಸಿದ್ದರು. ಚಂಡಮಾರುತದಿಂದಾಗಿ ಹಾನಿಗೀಡಾಗಿರುವ ಬೆಳೆನಷ್ಟದ ವರದಿಯನ್ನು ಎರಡು ದಿನಗಳೊಳಗೆ ನೀಡಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಅವರು ಸೂಚಿಸಿದ್ದಾರೆ.

ADVERTISEMENT

ಈ ನಡುವೆ ಉದ್ಧವ್ ಅವರನ್ನು ಗುರಿಯಾಗಿಸಿಕೊಂಡು, ‘ಮಹಾರಾಷ್ಟ್ರದ ಮುಖ್ಯಮಂತ್ರಿ ಕೇವಲ ಮೂರು ಗಂಟೆಗಳಲ್ಲೇ ನೆರೆಪೀಡಿತ ಪ್ರದೇಶ ಸಮೀಕ್ಷೆ ನಡೆಸಿ, ರಾಜಕೀಯ ಹೇಳಿಕೆಗಳನ್ನು ನೀಡುತ್ತಿದ್ದಾರೆ’ ಎಂದು ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಆಶ್ಚರ್ಯ ವ್ಯಕ್ತಪಡಿಸಿದ್ದರೆ, ಮತ್ತೊಂದೆಡೆ ‘ಕೇವಲ ಮೂರು ಗಂಟೆಗಳ ಅವಧಿಯಲ್ಲಿ ಮುಖ್ಯಮಂತ್ರಿ ಅವರು ನೆರೆಪೀಡಿತ ಪ್ರದೇಶಗಳ ಕಷ್ಟವನ್ನು ಹೇಗೆ ಅರ್ಥ ಮಾಡಿಕೊಂಡರು’ ಎಂದು ವಿಧಾನ ಪರಿಷತ್ತಿನ ಪ್ರತಿಪಕ್ಷದ ನಾಯಕ ಪ್ರವೀಣ್ ದಾರೇಕರ್ ಅವರು ಪ್ರಶ್ನಿಸಿದ್ದರು.

ಸಿಂಧುದುರ್ಗದ ಮಾಲ್ವನ್ ಪ್ರದೇಶದಲ್ಲಿ ಸುದ್ದಿಗಾರರು, ಬಿಜೆಪಿಯ ಟೀಕೆಯ ಕುರಿತು ಉದ್ಧವ್ ಅವರನ್ನು ಪ್ರಶ್ನಿಸಿದಾಗ ‘ನನ್ನ ಪ್ರವಾಸವು ಕೇವಲ ನಾಲ್ಕು ತಾಸುಗಳಲ್ಲಿ ಮುಕ್ತಾಯವಾದದ್ದು ಪರವಾಗಿಲ್ಲ. ಕನಿಷ್ಠ ನಾನು ಹೆಲಿಕಾಪ್ಟರ್‌ನಲ್ಲಿ ಫೋಟೊ ಸೆಷನ್‌ಗಾಗಿ ಬಂದಿಲ್ಲ. ನಾನೂ ಕೂಡ ಒಬ್ಬ ಫೋಟೊಗ್ರಾಫರ್. ನಾನಿಲ್ಲಿ ಪ್ರತಿಪಕ್ಷಗಳ ಟೀಕೆಗಳಿಗೆ ಉತ್ತರಿಸಲು ಬಂದಿಲ್ಲ’ ಎಂದು ಉತ್ತರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.