ನವದೆಹಲಿ: ವಿಮಾನಗಳಲ್ಲಿ ಮಧ್ಯದ ಸೀಟು ಖಾಲಿ ಬಿಡಬೇಕು, ಅದು ಸಾಧ್ಯವಾಗದಿದ್ದರೆ ಪ್ರಯಾಣಿಕರಿಗೆ 'ದೇಹ ಪೂರ್ತಿ ಸುತ್ತುವರಿಯುವಂತಹ ನಿಲುವಂಗಿ' ಒದಗಿಸುವಂತೆ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ವಿಮಾನಯಾನ ಸಂಸ್ಥೆಗಳಿಗೆ ಆಗ್ರಹಿಸಿದೆ.
ಕೊರೊನಾ ವೈರಸ್ ಸೋಂಕು ತಡೆಯುವ ನಿಟ್ಟಿನಲ್ಲಿ ಅಂತರ ಕಾಯ್ದುಕೊಳ್ಳುವುದು ಅತ್ಯಂತ ಮಹತ್ವ ಹೊಂದಿದೆ.
'ಮಧ್ಯದ ಸೀಟು ಭರ್ತಿ ಮಾಡದಂತೆ ಪೂರ್ಣ ಪ್ರಯತ್ನಿಸಬೇಕು. ಹೆಚ್ಚು ಪ್ರಯಾಣಿಕರ ಕಾರಣದಿಂದಾಗಿ ಮಧ್ಯದ ಸೀಟು ಭರ್ತಿಯಾದರೆ, ಪ್ರಯಾಣಿಕರಿಗೆ ನಿಲುವಂಗಿ ನೀಡಬೇಕು' ಎಂದು ಡಿಜಿಸಿಎ ಹೇಳಿದೆ.
ಕೋವಿಡ್–19 ವ್ಯಾಪಿಸುವುದನ್ನು ತಡೆಯಲು ದೇಶದಾದ್ಯಂತ ಲಾಕ್ಡೌನ್ ವಿಧಿಸುವ ಜೊತೆಗೆ ವಿಮಾನ ಪ್ರಯಾಣಗಳನ್ನು ಸ್ಥಗಿತಗೊಳಿಸಲಾಗಿತ್ತು. ಎರಡು ತಿಂಗಳ ಬಳಿಕ ಮೇ 25ರಂದು ಪ್ರಾದೇಶಿಕ ವಿಮಾನಯಾನ ಕಾರ್ಯಾಚರಣೆಗೆ ಸರ್ಕಾರ ಅನುಮತಿ ನೀಡಿತು. ಆಗಸ್ಟ್ ವರೆಗೂ (3 ತಿಂಗಳು) ವಿಮಾನ ಪ್ರಯಾಣಕ್ಕೆ ಸರ್ಕಾರ ಗರಿಷ್ಠ ಮಿತಿ ವಿಧಿಸಿತು. ಅದರ ಬೆನ್ನಲ್ಲೇ ಮಧ್ಯದ ಸೀಟು ಖಾಲಿ ಬಿಡುವ ಸೂಚನೆಯನ್ನು ಡಿಜಿಸಿಎ ಹಿಂಪಡೆದಿತ್ತು.
ವಿಮಾನಯಾನ ಸಂಸ್ಥೆಗಳ ಹಿತಾಸಕ್ತಿ ಕಾಪಾಡುವುದು ಹಾಗೂ ಪ್ರಯಾಣಿಕರ ಸುರಕ್ಷತೆಗಾಗಿ ಡಿಜಿಸಿಎ ಹೊಸ ಸೂಚನೆಗಳನ್ನು ಹೊರಡಿಸಿದೆ. ವಿದೇಶಗಳಲ್ಲಿ ಸಿಲುಕಿದ್ದ ಭಾರತೀಯರನ್ನು ಕರೆತರಲು ನಿಗದಿ ಪಡಿಸಲಾದ ಏರ್ ಇಂಡಿಯಾ ವಿಮಾನಗಳಲ್ಲಿ ಮಧ್ಯದ ಸೀಟುಗಳಿಗೆ ಬುಕ್ಕಿಂಗ್ ಅವಕಾಶ ನೀಡಿದ್ದರ ಸಂಬಂಧ ಸುಪ್ರೀಂ ಕೋರ್ಟ್ ಪ್ರಶ್ನಿಸಿತ್ತು.
'ಹೊರಗೆ ವ್ಯಕ್ತಿಯಿಂದ ವ್ಯಕ್ತಿಗೆ ಕನಿಷ್ಠ 6 ಅಡಿ ಅಂತರ ಕಾಯ್ದುಕೊಳ್ಳಬೇಕಿದೆ. ವಿಮಾನದಲ್ಲಿ ಸೋಂಕು ಹರಡುವುದಿಲ್ಲ ಎಂದು ಹೇಗೆ ಹೇಳುವಿರಿ? ವೈರಸ್ಗೇನು ತಿಳಿದಿದೆಯೇ ಇದು ವಿಮಾನ, ಇಲ್ಲಿ ಸೋಂಕು ಹರಡಬಾರದೆಂದು?' ಎಂದು ಕೋರ್ಟ್ ಪ್ರಶ್ನಿಸಿತ್ತು. ಆದರೆ, ಜೂನ್ 6ರ ವರೆಗೂ ಮಧ್ಯದ ಸೀಟುಗಳನ್ನು ಬುಕ್ ಮಾಡಲು ಏರ್ ಇಂಡಿಯಾಗೆ ಅವಕಾಶ ನೀಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.