ಲಖನೌ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾಮಗಾರಿ ಫೆಬ್ರುವರಿ 21ರಂದು ಆರಂಭವಾಗಲಿದೆ ಎಂದು ಕುಂಭ ಮೇಳದಲ್ಲಿ ನಡೆದ‘ಪರಮ ಧರ್ಮ ಸಂಸತ್’ ಘೋಷಿಸಿದೆ.
ಅಯೋಧ್ಯೆಯ ವಿವಾದಾತ್ಮಕ ಸ್ಥಳದ ಸುತ್ತಲು ಇರುವ ವಿವಾದಾತ್ಮಕವಲ್ಲದ ಸ್ಥಳವನ್ನು ಮಂದಿರ ನಿರ್ಮಾಣಕ್ಕೆ ಹಸ್ತಾಂತರಿಸಲು ಅವಕಾಶ ಕೊಡಬೇಕು ಎಂದು ಕೇಂದ್ರ ಸರ್ಕಾರವು ಇತ್ತೀಚೆಗೆ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು. ಅದರ ಬೆನ್ನಿಗೇ, ಸರ್ಕಾರದ ಮೇಲೆ ಇನ್ನಷ್ಟು ಒತ್ತಡ ಹೇರುವುದಕ್ಕಾಗಿಧರ್ಮ ಸಂಸತ್, ಕಾಮಗಾರಿ ದಿನಾಂಕವನ್ನು ಘೋಷಿಸಿದೆ.
ದ್ವಾರಕಾ ಪೀಠದ ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಅವರ ಅಧ್ಯಕ್ಷತೆಯಲ್ಲಿ ಧರ್ಮ ಸಂಸತ್ ನಡೆಯಿತು. ರಾಮ ಹುಟ್ಟಿದ ಸ್ಥಳದ ಬದಲಿಗೆ ಬೇರೊಂದು ಸ್ಥಳದಲ್ಲಿ ಮಂದಿರ ನಿರ್ಮಿಸುವ ಷಡ್ಯಂತ್ರವನ್ನು ಬಿಜೆಪಿ ನಡೆಸುತ್ತಿದೆ ಎಂದು ಧರ್ಮ ಸಂಸತ್ನಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಫೆಬ್ರುವರಿ21ರಂದು ಶಿಲಾನ್ಯಾಸ ನಡೆಯಲಿದೆ. ಅಂದಿನಿಂದಲೇ ಕಾಮಗಾರಿ ಆರಂಭವಾಗಲಿದೆ ಎಂದು ಸ್ವಾಮಿ ಅವಿಮುಕ್ತೇಶ್ವರಾನಂದ ಮಹಾರಾಜ್ ಘೋಷಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.