ನವದೆಹಲಿ:‘ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಒತ್ತಾಯಿಸಲು ತಕ್ಷಣದಿಂದಲೇ ದೇಶದಾದ್ಯಂತ ಅಭಿಯಾನ ಆರಂಭಿಸುತ್ತೇವೆ. ಡಿಸೆಂಬರ್ 9ರಂದು ದೆಹಲಿಯಲ್ಲಿ ಭಾರಿ ಸಮ್ಮೇಳನ ನಡೆಸುತ್ತೇವೆ’ ಎಂದು ಅಖಿಲ ಭಾರತ ಸಂತ ಸಮಿತಿಯು ‘ಧರ್ಮಾದೇಶ’ ಸಭೆಯಲ್ಲಿ ನಿರ್ಣಯ ಕೈಗೊಂಡಿದೆ.
‘ಮಂದಿರ ನಿರ್ಮಿಸಲು ಇಷ್ಟು ವಿಳಂಬವಾಗಿದ್ದು ಏಕೆ ಎಂದು ಸರ್ಕಾರವನ್ನು ಕೇಳಲು ಬಯಸುತ್ತೇವೆ. ಇದು ಇನ್ನಷ್ಟು ವಿಳಂಬವಾಗಬಾರದು. ಸರ್ಕಾರ ತಕ್ಷಣವೇ ಸುಗ್ರೀವಾಜ್ಞೆ ಅಥವಾ ಕಾನೂನು ಜಾರಿಗೆ ತಂದು ಮಂದಿರ ನಿರ್ಮಾಣಕ್ಕೆ ಚಾಲನೆ ನೀಡಬೇಕು. ಇದು ಧರ್ಮಾದೇಶ. 5,000 ವರ್ಷಗಳಿಂದ ಈಚೆಗೆ ಇಂತಹ ಯಾವುದೇ ಧರ್ಮಾದೇಶ ವ್ಯಕ್ತವಾಗಿರಲಿಲ್ಲ. ಇದನ್ನು ಸರ್ಕಾರ ಪಾಲಿಸಬೇಕು. ಅದರಲ್ಲಿ ರಾಜಿಯೇ ಇಲ್ಲ’ ಎಂದು ಸಂತ ಸಮಿತಿ ತನ್ನ ನಿರ್ಣಯದಲ್ಲಿ ಹೇಳಿದೆ.
‘ಮಂದಿರ ನಿರ್ಮಾಣಕ್ಕೆ ಸರ್ಕಾರದ ಮೇಲೆ ಒತ್ತಡ ಹೇರುವ ಸಲುವಾಗಿ ನವೆಂಬರ್ 25ರಂದು ಅಯೋಧ್ಯೆ, ನಾಗಪುರ ಮತ್ತು ಬೆಂಗಳೂರಿನಲ್ಲಿ ಧರ್ಮ ಸಭೆ ನಡೆಸುತ್ತೇವೆ. ಮಂದಿರ ನಿರ್ಮಾಣದ ಅಗತ್ಯದ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಡಿಸೆಂಬರ್ 18ರ ನಂತರ 500 ಜಿಲ್ಲೆಗಳಲ್ಲಿ ಅಭಿಯಾನ ಆರಂಭಿಸುತ್ತೇವೆ’ಎಂದು ಸಮಿತಿಯ ಅಧ್ಯಕ್ಷ ಜಗದ್ಗುರು ಹಂಸದೇವವಾಚಾರ್ಯ ಹೇಳಿದ್ದಾರೆ.
**
ದೇಶದ್ರೋಹಿ ನೋಟಾ
‘ಚುನಾವಣೆಯಲ್ಲಿ ಯಾರೂ ‘ನೋಟಾ’ ಮತಗಳನ್ನು ಚಲಾಯಿಸಬಾರದು. ಆ ಮತಗಳು ಪ್ರಜಾಪ್ರಭುತ್ವಕ್ಕೆ ವಿರುದ್ಧವಾದವು. ಅಂತಹ ಮತ ಚಲಾಯಿಸುವವರು ದೇಶದ್ರೋಹಿಗಳು’ ಎಂದೂ ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ.
**
ಧರ್ಮಗ್ರಂಥಗಳು ಹೇಳುವಂತೆ ನಮ್ಮ ಹೃದಯದಲ್ಲಿ ರಾಮಮಂದಿರ ನಿರ್ಮಿಸಿಕೊಂಡರೆ, ಬೇರೆಡೆ ರಾಮನಿದ್ದಾನೋ ಇಲ್ಲವೋ ಎಂಬುದು ನಗಣ್ಯ. ಏಕೆಂದರೆ ರಾಮ ಸರ್ವಾಂತರ್ಯಾಮಿ
-ಶಶಿ ತರೂರ್, ಕಾಂಗ್ರೆಸ್ ನಾಯಕ
**
ನನ್ನ ಶವದ ಮೇಲೆಯೇ ರಾಮ ಮಂದಿರ ನಿರ್ಮಿಸಬೇಕು ಎಂದು ಕಾಂಗ್ರೆಸ್ ಬಯಸುವುದಾದರೆ, ಅದೂ ಆಗೇ ಹೋಗಲಿ. ನಾನು ಎಲ್ಲದಕ್ಕೂ ಸಿದ್ಧವಾಗೇ ಇದ್ದೇನೆ.
-ಉಮಾ ಭಾರತಿ, ಕೇಂದ್ರ ಸಚಿವೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.