ADVERTISEMENT

ಅಯೋಧ್ಯೆ: ನವೆಂಬರ್‌ನಲ್ಲಿ ತೀರ್ಪು?

ಪಿಟಿಐ
Published 18 ಸೆಪ್ಟೆಂಬರ್ 2019, 20:01 IST
Last Updated 18 ಸೆಪ್ಟೆಂಬರ್ 2019, 20:01 IST
ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್   

ನವದೆಹಲಿ: ಅಯೋಧ್ಯೆಯ ರಾಮಜನ್ಮಭೂಮಿ–ಬಾಬರಿ ಮಸೀದಿ ನಿವೇಶನ ವಿವಾದದ ವಿಚಾರಣೆಯನ್ನು ಅಕ್ಟೋಬರ್‌ 18ರೊಳಗೆ ಪೂರ್ಣಗೊಳಿಸುವ ಗಡುವನ್ನು ಸುಪ್ರೀಂ ಕೋರ್ಟ್‌ ಹಾಕಿಕೊಂಡಿದೆ. ಹಾಗಾಗಿ, ರಾಜಕೀಯವಾಗಿ ಅತ್ಯಂತ ಸೂಕ್ಷ್ಮವಾದ ಈ ಪ್ರಕರಣದ ತೀರ್ಪು ನವೆಂಬರ್‌ ಮಧ್ಯಭಾಗದಲ್ಲಿ ಪ್ರಕಟವಾಗುವ ನಿರೀಕ್ಷೆ ಇದೆ.

ಕಕ್ಷಿದಾರರು ಬಯಸಿದರೆ ವಿವಾದವನ್ನು ಮಧ್ಯಸ್ಥಿಕೆ ಮೂಲಕ ಪರಿಹರಿಸಲು ಅವಕಾಶ ಇದೆ. ಹಾಗಿದ್ದರೂ ದಿನನಿತ್ಯದ ವಿಚಾರಣೆ ಮುಂದುವರಿಯಲಿದೆ. ಅ. 18ರಂದು ವಿಚಾರಣೆ ಮುಗಿದರೆ ತೀರ್ಪು ಬರೆಯಲು ನ್ಯಾಯಮೂರ್ತಿಗಳಿಗೆ ನಾಲ್ಕು ವಾರ ದೊರೆಯಲಿದೆ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ನೇತೃತ್ವದ ಐವರು ನ್ಯಾಯಮೂರ್ತಿಗಳ ಪೀಠ ಹೇಳಿದೆ.

ತಮ್ಮ ವಾದಮಂಡನೆ ಮುಗಿಸುವ ತಾತ್ಕಾಲಿಕ ವೇಳಾಪಟ್ಟಿಯನ್ನು ಸಲ್ಲಿಸುವಂತೆ ಹಿಂದೂ ಮತ್ತು ಮುಸ್ಲಿಂ ಕಕ್ಷಿದಾರರಿಗೆ ಪೀಠವು ಬುಧವಾರ ಸೂಚಿಸಿದೆ.

ADVERTISEMENT

ಮಧ್ಯಸ್ಥಿಕೆ ಪ್ರಕ್ರಿಯೆಯನ್ನು‍ಪುನರಾರಂಭಿಸುವಂತೆ ಕೆಲವು ಕಕ್ಷಿದಾರರು ತಮಗೆ ಪತ್ರ ಬರೆದಿದ್ದಾರೆ ಎಂದು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಫ್‌.ಎಂ.ಐ. ಖಲೀಫುಲ್ಲಾ ಮಾಹಿತಿ ನೀಡಿದ್ದಾರೆ. ಮಧ್ಯಸ್ಥಿಕೆ ಪ್ರಕ್ರಿಯೆಯನ್ನು ಮುಂದುವರಿಸಬಹುದು. ಆದರೆ, ಇದು ಗೋಪ್ಯವಾಗಿಯೇ ನಡೆಯಬೇಕು ಎಂದು ಪೀಠವು ಸೂಚಿಸಿದೆ.

ಖಲೀಫುಲ್ಲಾ ನೇತೃತ್ವದ ಮೂವರು ಸದಸ್ಯರ ಮಧ್ಯಸ್ಥಿಕೆ ಸಮಿತಿಯನ್ನು ಸುಪ್ರೀಂ ಕೋರ್ಟ್‌ ಮಾರ್ಚ್‌ 8ರಂದು ನೇಮಿಸಿತ್ತು. ವಿವಾದದ ಸೌಹಾರ್ದಯುತ ಪರಿಹಾರಕ್ಕೆ ಸುಮಾರು ನಾಲ್ಕು ತಿಂಗಳು ಮಧ್ಯಸ್ಥಿಕೆ ಮಾತುಕತೆ ನಡೆದಿತ್ತು. ಆದರೆ, ಅಂತಿಮ ತೀರ್ಮಾನಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಸುಪ್ರೀಂ ಕೋರ್ಟ್ ವಿಚಾರಣೆ ಕೈಗೆತ್ತಿಕೊಂಡಿತ್ತು.

ಮುಖ್ಯಾಂಶಗಳು

* ಅ. 18ರೊಳಗೆ ವಿಚಾರಣೆ ಪೂರ್ಣಗೊಳಿಸಲು ಗಡುವು

* ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ಅವರು ನ. 17ರಂದು ನಿವೃತ್ತಿ

* ಅವರ ನಿವೃತ್ತಿಗೆ ಮೊದಲು ತೀರ್ಪು ಪ್ರಕಟಿಸುವ ಸಾಧ್ಯತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.