ADVERTISEMENT

ರಾಮ ಮಂದಿರ ಉದ್ಘಾಟನೆ: ನೂರಾರು ದೇವಾಲಯ ಸ್ವಚ್ಛಗೊಳಿಸಿದ ಲಾತೂರ್ ಜಿಲ್ಲಾಡಳಿತ

ಪಿಟಿಐ
Published 20 ಜನವರಿ 2024, 14:37 IST
Last Updated 20 ಜನವರಿ 2024, 14:37 IST
<div class="paragraphs"><p>'ಸ್ವಚ್ಛ ತೀರ್ಥ' ಅಭಿಯಾನದ ಚಿತ್ರ</p></div>

'ಸ್ವಚ್ಛ ತೀರ್ಥ' ಅಭಿಯಾನದ ಚಿತ್ರ

   

ಕೃಪೆ: x / @Infolatur

ಲಾತೂರ್‌: ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ರಾಮ ಮಂದಿರದಲ್ಲಿ ನಡೆಯುವ ಶ್ರೀ ರಾಮ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಅಂಗವಾಗಿ ಮಹಾರಾಷ್ಟ್ರದ ಲಾತೂರ್‌ ಜಿಲ್ಲೆಯಲ್ಲಿ ನೂರಾರು ದೇವಾಲಯಗಳನ್ನು ಸ್ವಚ್ಛಗೊಳಿಸಲಾಗಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ADVERTISEMENT

ರಾಮ ಮಂದಿರ ದೇವಾಲಯದಲ್ಲಿ ಜನವರಿ 22ರಂದು ಜರುಗಲಿರುವ ಧಾರ್ಮಿಕ ಕಾರ್ಯಕ್ರಮದ ಹಿನ್ನೆಲೆಯಲ್ಲಿ, ಜಿಲ್ಲೆಯ ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಮೂರು ದಿನಗಳಿಂದ 'ಸ್ವಚ್ಛ ತೀರ್ಥ' ಅಭಿಯಾನ ನಡೆಸಲಾಯಿತು. ಸರ್ಕಾರಿ ಅಧಿಕಾರಿಗಳು, ನೌಕರರು, ಸ್ವಚ್ಛತಾ ಕಾರ್ಮಿಕರು ಹಾಗೂ ಜನಸಾಮಾನ್ಯರು ಈ ಅಭಿಯಾನದಲ್ಲಿ ಭಾಗಿಯಾಗಿದ್ದರು ಎಂದು ಲಾತೂರ್‌ ನಗರ ಪಾಲಿಕೆಯ ಜಂಟಿ ಆಯುಕ್ತ ರಾಮದಾಸ್‌ ಕೊಕರೆ ಹೇಳಿದ್ದಾರೆ.

ಜಿಲ್ಲೆಯಲ್ಲಿರುವ ಧಾರ್ಮಿಕ ಕೇಂದ್ರಗಳು ಹಾಗೂ ತೀರ್ಥ ಕ್ಷೇತ್ರಗಳಿಗೆ ತೆರಳುವ ದಾರಿಯನ್ನೂ ಸ್ವಚ್ಛಗೊಳಿಸಲಾಗಿದೆ. ಅಭಿಯಾನದ ವೇಳೆ ನಗರದ ಪ್ರದೇಶದಲ್ಲಿ ಸುಮಾರು 10 ಟನ್‌ನಷ್ಟು ತ್ಯಾಜ್ಯ ಸಂಗ್ರಹಿಸಲಾಗಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ.

ಅಯೋಧ್ಯೆ ಕಾರ್ಯಕ್ರಮದ ದಿನದಂದು ದೇಶದಾದ್ಯಂತ ವಿವಿಧ ಸೇವಾಕಾರ್ಯಗಳು ನಡೆಯಲಿವೆ. ದೇಶದಾದ್ಯಂತ ಇರುವ ಕೇಂದ್ರ ಸರ್ಕಾರಿ ಕಚೇರಿಗಳಿಗೆ ‌ಅರ್ಧದಿನ ರಜೆ ಘೋಷಿಸಲಾಗಿದೆ. ವಿವಿಧ ರಾಜ್ಯ ಸರ್ಕಾರಗಳೂ ಇದೇ ರೀತಿಯ ಕ್ರಮಗಳನ್ನು ಕೈಗೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.