ADVERTISEMENT

ಆಯುಷ್ಮಾನ್ ಭಾರತ್ ಪರಿವರ್ತನೆ ಸಲ್ಲದು: ಮನ್‌ಸುಖ್ ಮಾಂಡವಿಯಾ

ಪಿಟಿಐ
Published 5 ಮಾರ್ಚ್ 2023, 17:20 IST
Last Updated 5 ಮಾರ್ಚ್ 2023, 17:20 IST
ಮನ್‌ಸುಖ್ ಮಾಂಡವಿಯಾ: ಚಿತ್ರ ಪಿಟಿಐ 
ಮನ್‌ಸುಖ್ ಮಾಂಡವಿಯಾ: ಚಿತ್ರ ಪಿಟಿಐ    

ಪಟಿಯಾಲಾ/ ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಕಾರ್ಯಕ್ರಮ ಆಯುಷ್ಮಾನ್ ಭಾರತ್ - ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳನ್ನು (ಎಬಿ-ಎಚ್‍ಡಬ್ಲ್ಯುಸಿ‍) ರಾಜ್ಯ ಸರ್ಕಾರಗಳು ಬೇರೆ ಯಾವುದೇ ಯೋಜನೆಗೆ ಪರಿವರ್ತಿಸಲು ಸಾಧ್ಯವಿಲ್ಲ ಎಂದು ಆರೋಗ್ಯ ಸಚಿವ ಮನ್‌ಸುಖ್‌ ಮಾಂಡವೀಯ ಮಾಂಡವೀಯ ಭಾನುವಾರ ಹೇಳಿದ್ದಾರೆ.

ಎಬಿ-ಎಚ್‍ಡಬ್ಲ್ಯುಸಿ‍ಯನ್ನು ಪಂಜಾಬ್ ಸರ್ಕಾರ ಆಡಳಿತಾರೂಢ ಎಎಪಿ ಪಕ್ಷದ ನೆಚ್ಚಿನ ಯೋಜನೆಯಾದ ‘ಮೊಹಲ್ಲಾ ಕ್ಲಿನಿಕ್‌‘ಗಳಾಗಿ ಪರಿವರ್ತಿಸುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಈ ಹಿಂದೆ ಹೇಳಿತ್ತು.

ಎಬಿ-ಎಚ್‍ಡಬ್ಲ್ಯುಸಿ‍ಯನ್ನು ಕೇಂದ್ರ ಮತ್ತು ರಾಜ್ಯ 60:40 ಅನುಪಾತದೊಂದಿಗೆ ರೂಪಿಸಿದೆ.

ADVERTISEMENT

ಮಾಂಡವಿಯಾ ಭಾನುವಾರ ಪಟಿಯಾಲಕ್ಕೆ ಭೇಟಿ ನೀಡಿ, ನಗರದ ನೀಟ್-ಪಿಜಿ ಪರೀಕ್ಷಾ ಕೇಂದ್ರದಲ್ಲಿ ಭದ್ರತಾ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಅಭ್ಯರ್ಥಿಗಳ ಪೋಷಕರೊಂದಿಗೆ ಸಂವಹನ ನಡೆಸಿದರು.

ಪರೀಕ್ಷೆಯ ಸಮಯದಲ್ಲಿ ಕೇಂದ್ರ ಆರೋಗ್ಯ ಸಚಿವರು ರಾಷ್ಟ್ರೀಯ ಪರೀಕ್ಷಾ ಮಂಡಳಿ (ಎನ್‌ಬಿಇಎಂಎಸ್) ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿರುವುದು ಇದೇ ಮೊದಲು ಎಂದು ಆರೋಗ್ಯ ಸಚಿವಾಲಯದ ಹೇಳಿಕೆ ತಿಳಿಸಿದೆ.

‘ಪಂಜಾಬ್‌ನ ಪಟಿಯಾಲದಲ್ಲಿರುವ ನೀಟ್-ಪಿಜಿ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ವ್ಯವಸ್ಥೆಗಳನ್ನು ಪರಿಶೀಲಿಸಿದೆ’ ಎಂದು ಮಾಂಡವಿಯಾ ಟ್ವೀಟ್ ಮಾಡಿದ್ದಾರೆ.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ‘ಕೇಂದ್ರವು ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳಿಗೆ ಮಾತ್ರ ರಾಷ್ಟ್ರೀಯ ಆರೋಗ್ಯ ಮಿಷನ್ (ಎನ್ಎಚ್ಎಂ) ಅನುದಾನವನ್ನು ಬಿಡುಗಡೆ ಮಾಡಿದೆ ಮತ್ತು ಈ ಯೋಜನೆಯನ್ನು ರಾಜ್ಯ ಸರ್ಕಾರ ಪರಿವರ್ತಿಸಲು ಸಾಧ್ಯವಿಲ್ಲ’ ಎಂದು ಸ್ಪಷ್ಟಪಡಿಸಿದರು.

ರಾಜ್ಯವು ಯೋಜನೆಯನ್ನು ಮುಚ್ಚಬಹುದು. ಆದರೆ, ಅದನ್ನು ಪರಿವರ್ತಿಸಲು ಸಾಧ್ಯವಿಲ್ಲ. ರಾಜ್ಯ ಸರ್ಕಾರಗಳು ತಮ್ಮದೇ ಯೋಜನೆಯನ್ನು ಉತ್ತೇಜಿಸಬಹುದು. ಆದರೆ, ಕೇಂದ್ರದ ಅನುದಾನವನ್ನು ಬೇರೆ ಯಾವುದೇ ರಾಜ್ಯ ಯೋಜನೆಗೆ ಖರ್ಚು ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.